ತುಮಕೂರು
‘ಅಂತರ ರಾಷ್ಟ್ರೀಯ ಭಗವದ್ಗೀತಾ ಸಮ್ಮೇಳನ’ ಇದೇ ಸೆ. 15 ಮತ್ತು 16 ರಂದು ಅಮೆರಿಕದ ಡಲ್ಲಾಸ್ ನಗರದಲ್ಲಿ ನೆರವೇರಲಿದ್ದು, ಈ ಸಮ್ಮೇಳನದಲ್ಲಿ ಭಾಷಣಕಾರರಾಗಿ ಹಾಗೂ ಗೋಷ್ಠಿಯಲ್ಲಿ ಭಾಗವಹಿಸಲು ಆಹ್ವಾನಿತರಾಗಿರುವ ತುಮಕೂರು ಜಿಲ್ಲೆ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿ ಅಮೇರಿಕಾಗೆ ತೆರಳಿದ್ದಾರೆ.
ಅವರಿಗೆ ಅಂತರ ರಾಷ್ಟ್ರೀಯ ಗೀತಾ ಫೌಂಡೇಷನ್ ಟ್ರಸ್ಟ್ ಆಹ್ವಾನವನ್ನು ನೀಡಿದೆ. ಅಮೆರಿಕದ ಡಲ್ಲಾಸ್ ನಗರದ ಸಂಕಟ ಮೋಚನ ಹನುಮಾನ್ ಮಂದಿರದಲ್ಲಿ ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಮ್ಮೇಳನ ನಡೆಯಲಿದ್ದು, ದೇಶ ವಿದೇಶಗಳ ಆಹ್ವಾನಿತರು ಭಾಗವಹಿಸುವರು.
ಇದೇ ಸಂದಭರ್ದಲ್ಲಿ ಅಟ್ಲಾಂಟಾ ಚಿನ್ಮಯ ಮಿಷನ್ ವತಿಯಿಂದ ಅನೇಕ ಉಪನ್ಯಾಸ ಕಾರ್ಯಕ್ರಮಗಳು ಏರ್ಪಟ್ಟಿವೆ. ಅಟ್ಲಾಂಟಾ ಮಹಾನಗರದ ಹಿಂದೂ ದೇವಸ್ಥಾನ ಮತ್ತು ವೇದಾಂತ ಸೆಂಟರ್ನಲ್ಲಿಯೂ ಸಹ ಸ್ವಾಮೀಜಿಯವರು ಉಪನ್ಯಾಸ ನೀಡಲಿದ್ದಾರೆ.