ಮಾಯಕೊಂಡ:
ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆಂಜನೇಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಆಂಜನೇಯ ಸ್ವಾಮಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಆರಂಭವಾಗಿದೆ.
ಬುಧವಾರ ಸಂಜೆ ಗಣಪತಿ ಹೋಮ, ಪುಣ್ಯಾಹವಾಚನಾ, ನಾಂದಿ, ಅಂಕುರ, ನವಗ್ರಹ ಪೂಜಾ, ಪಂಚಬ್ರಹ್ಮ ಪೂಜಾ, ವಾಸ್ತು ಕಲಾತತ್ವ ದೇವತಾ ಅವಾಹನಾ, ಪ್ರಧಾನಾ ದೇವತಾ ಅವಾಹನಾ, ಅಗ್ನಿ ಪ್ರತಿಷ್ಠೆ ಮತ್ತು ವಿವಿಧ ಶಾಂತಿ ಹೋಮ ಜರುಗಿತು.
ಇಂದು (ನ.8ರಂದು) ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾಜಪೂಜೆ, 108 ಕುಂಭಗಳಿಂದ ಗಂಗಾ ಜಲಾಭಿಶೇಕ, ಪಂಚಾಮೃತಾಭಿಶೇಕ ನಡೆಯಲಿವೆ. ರಾಜ ಬೀದಯಲ್ಲಿ ಗ್ರಾಮ ದೇವತೆಗಳ ಉತ್ಸವ ನಡೆಯಲಿದೆ.
ವಿವಿಧ ಅಲಂಕಾರ ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವವನ್ನು ಕೋಲಾರದ ಜ್ಞಾನಾನಂದ ಆಶ್ರಮದ ಶ್ರೀಶಿವಾತ್ಮಾನಂದ ಸ್ವಾಮೀಜಿ ಮತ್ತು ದಾವಣಗೆರೆಯ ವೀರೇಶಾಚಾರ್ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗಾಗಿ ಅನ್ನಸಂತರ್ಪಣೆ ನೆರವೇರಲಿದೆ.
ಕಳೆದ ಸೋಮವಾರ ಆಂಜನೇಯ ಸ್ವಾಮಿ ಮೂರ್ತಿಯ ಗರ್ಭಗುಡಿ ಪ್ರವೇಶ ಕಾರ್ಯಕ್ರಮ ನಡೆಸಲಾಯಿತು. ಸುಮಾರು 10 ಅಡಿ ಎತ್ತರದ ಪುರಾತನ ಆಂಜನೇಯ ವಿಗ್ರಹವನ್ನು ಕ್ರೇನ್ ಮೂಲಕ ಗರ್ಭಗುಡಿಯೊಳಕ್ಕೆ ಇಳಿಸಲಾಯಿತು.ಜಟೆ ಹೊಂದಿರುವ ಆಂಜನೇಯ ಸ್ವಾಮಿಯ ವಿಶಿಷ್ಠ ಮೂರ್ತಿಯನ್ನು ವ್ಯಾಸರಾಯರು ಪ್ರತಿಷ್ಠಾಪಿಸಿದ್ದರೆಂಬ ಐತಿಹ್ಯವಿದೆ.