ಬೆಂಗಳೂರು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಎಸ್ಐಟಿ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ಕರ್ನಾಟಕದ ಎಸ್ಐಟಿ ವಶಕ್ಕೆ ಪಡೆಯುವ ಸಂಬಂಧ ರಾಜ್ಯ ಪೊಲೀಸರು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ.
ಮಹಾರಾಷ್ಟ್ರ ಎಸ್ಐಟಿ ಅಧಿಕಾರಿಗಳ ಜೊತೆ ರಾಜ್ಯದ ಅಧಿಕಾರಿಗಳು ಇಂದು ಮಾತುಕತೆ ನಡೆಸಿ ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಅಗತ್ಯ ಬಿದ್ದರೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಬಾಡಿವಾರೆಂಟ್ ಮೇಲೆ ವಶಕ್ಕೆ ನೀಡುವಂತೆ ರಾಜ್ಯದ ಎಸ್ಐಟಿ ಮನವಿ ಸಲ್ಲಿಸುವ ಸಾದ್ಯತೆ ಇದೆ. ರಾಜ್ಯದ ವಿಶೇಷ ಪೊಲೀಸ್ ಪಡೆ ನೀಡಿದ ಮಾಹಿತಿ ಆಧರಿಸಿ ಮುಂಭೈನಲ್ಲಿ ವೈಭವ್ ರಾವತ್ ಬಂಧನವಾಗಿತ್ತು. ಬಳಿಕ ಶರದ್ ಕಲಾಸ್ಕರ್ ಮತ್ತು ಸುಧನ್ವ ಗೊಂಧಾಲೇಕರ್ ಅವರನ್ನು ಬಂಧಿಸಲಾಗಿತ್ತು.
ಬಂಧಿತ ಆರೋಪಿಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, 11 ಕಂಟ್ರಿಮೇಡ್ ಪಿಸ್ತೂಲ್ಗಳು, ಜೀವಂತ ಗುಂಡುಗಳು ಜಪ್ತಿಯಾಗಿದ್ದವು. ಈ ಐವರು ಆರೋಪಿಗಳ ಪೈಕಿ ಒಬ್ಬರು ಗೌರಿ ಹತ್ಯೆಗೆ ಪಿಸ್ತೂಲ್ ರವಾನೆ ಮಾಡಿರುವ ಬಗೆ ಮಾಹಿತಿ ಕಲೆಹಾಕಲಾಗಿತ್ತು. ಪಿಸ್ತೂಲ್ ವಶಕ್ಕೆ ಪಡೆಯಲು ಆರೋಪಿಗಳ ವಿಚಾರಣೆ ಅಗತ್ಯ ಎಂದು ಕೋರ್ಟ್ಗೆ ತಿಳಿಸಲಾಗಿತ್ತು.
ಗೌರಿ ಲಂಕೇಶ್ ಹತ್ಯೆಗೆ ಪಿಸ್ತೂಲ್ ಕಳುಹಿಸಿದ್ದ ಮಹಾರಾಷ್ಟ್ರದ ಹಿಂದೂ ಸಂಘಟನೆಗಳ ಮುಖಂಡರಾದ ವೈಭವ ರಾವತ್, ಸುದನ್ವ, ಗೊಂಧಾಳೇಕರ್, ಶರದ್ ಕಲಾಸ್ಕರ್ ಸೇರಿ ಐವರನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಉದ್ದೇಶಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ವೈಭವ ರಾವತ್, ಸುದನ್ವ, ಗೊಂಧಾಳೇಕರ್, ಶರದ್ ಕಲಾಸ್ಕರ್ರನ್ನು ಬಂಧಿಸಿ, 16 ಪಿಸ್ತೂಲ್ಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.
ಅವುಗಳಲ್ಲಿ 15 ಪಿಸ್ತೂಲ್ಗಳನ್ನು ಗೌರಿ ಹತ್ಯೆಯ ನಂತರ ಖರೀದಿಸಿರುವುದು ಪತ್ತೆಯಾಗಿದೆ. ಇನ್ನೊಂದು ಪಿಸ್ತೂಲ್ ಅನ್ನು ಗೌರಿ ಹತ್ಯೆಗೆ ಖರೀದಿಸಿ ಈ ಮೂವರು ಖರೀದಿಸಿರುವ ಮಾಹಿತಿ ಲಭ್ಯವಾಗಿರುವ ಬೆನ್ನಲ್ಲೇ ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡಿರುವ ಎಸ್ಐಟಿ ಅಧಿಕಾರಿಗಳು, ಈ ಮೂವರ ಜೊತೆಗೆ ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಆರೋಪಿಗಳ ವಿಚಾರಣೆ ನಡೆಸಿದರೆ, ಗೌರಿ ಹತ್ಯೆಗೆ ಬಳಸಿದ ಪಿಸ್ತೂಲ್ ಪತ್ತೆಯಾಗುವ ಸಾಧ್ಯತೆ ಇದೆ. ತನಿಖೆಯು ಮುಗಿಯುವ ಹಂತಕ್ಕೆ ಬಂದಿರುವುದರಿಂದ ಪಿಸ್ತೂಲ್ ಮೂಲವನ್ನು ಈ ಐವರ ವಿಚಾರಣೆಯಿಂದ ಪತ್ತೆ ಹಚ್ಚಬಹುದು ಎನ್ನುವುದು ಎಸ್ಐಟಿ ಅಧಿಕಾರಿಗಳ ಲೆಕ್ಕಾಚಾರವಾಗಿದೆ.
ಗೌರಿ ಹತ್ಯೆಗೆ ಬಳಸಿದ ಪಿಸ್ತೂಲ್ ಪತ್ತೆಯಾದರೆ, ತನಿಖೆಯು ಪೂರ್ಣಗೊಳ್ಳಲಿದ್ದು, ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿಸಿರುವ 12 ಮಂದಿ ಆರೋಪಿಗಳ ಪಾತ್ರದ ಬಗ್ಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳು, ವೈಭವ ರಾವತ್, ಸುದನ್ವ, ಗೊಂಧಾಳೇಕರ್, ಶರದ್ ಕಲಾಸ್ಕರ್ ಸೇರಿ ಐವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.