ದಾವಣಗೆರೆ:
ನಗರದ ಹೊರವಲಯದಲ್ಲಿರುವ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾರಂಭೋತ್ಸವ ಇಂದು (ಮಾ.15ರಂದು) ನಡೆಯಲಿದೆ ಎಂದು ಎಸ್ಎಸ್ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ನ ಪ್ರಾಂಶುಪಾಲ ಡಾ.ಕಾಳಪ್ಪನವರ್ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಬೆಳಿಗ್ಗೆ 10.15ಕ್ಕೆ ನಡೆಯುವ ಆಸ್ಪತ್ರೆ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಎಸ್.ಎಸ್.ಮಲ್ಲಿಕಾರ್ಜುನ್ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಶಾಮನೂರು ಶಿವಶಂಕರಪ್ಪನವರು ಭಾಗವಹಿಸಲಿದ್ದಾರೆಂದು ಹೇಳಿದರು.
ಕ್ಯಾನ್ಸರ್ ರೋಗ ತಡೆಗಟ್ಟುವ ಹಾಗೂ ಕ್ಯಾನ್ಸರ್ ರೋಗಿಗಳ ಆರೈಕೆ ಮಾಡುವ ನಿಟ್ಟಿನಲ್ಲಿ ಬಾಪೂಜಿ ವಿದ್ಯಾಸಂಸ್ಥೆ, ಬಾಪೂಜಿ ಕ್ಯಾನ್ಸರ್ ಹಾಸ್ಪಿಟಲ್ ಟ್ರಸ್ಟ್, ಜೆಜೆಎಂ ಮೆಡಿಕಲ್ ಕಾಲೇಜು ಮತ್ತು ಎಸ್ಎಸ್ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ಸಹಯೋಗದಲ್ಲಿ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯು ಇಂದಿನಿಂದ ಕಾರ್ಯನಿರ್ವಹಿಸಲಿದೆ ಎಂದರು.
ಕ್ಯಾನ್ಸರ್ ರೋಗ ಚಿಕಿತ್ಸೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಇದರಿಂದ ದೂರದೂರಿಗೆ ರೋಗಿಗಳು ತೆರಳಲು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಅತ್ಯಾಧುನಿಕವಾದ ಲಿನಿಯರ್ ಎಕ್ಟಲಿರೇಟರ್ ಯಂತ್ರದ ಸಹಯೋಗದೊಂದಿಗೆ ದಿನವೊಂದಕ್ಕೆ 100ರಿಂದ 130 ರೋಗಿಗಳ ಆರೈಕೆ ಮಾಡುವ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಉಪಕರಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ತಲೆ ಬಾಯಿ, ಕುತ್ತಿಗೆ ಕ್ಯಾನ್ಸರ್, ಸೈನ್, ಗರ್ಭಕೋಶ ಕ್ಯಾನ್ಸರ್, ಅನ್ನನಾಳ, ಉದರ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್, ಎಲಬಿನ ಕ್ಯಾನ್ಸರ್ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಬಿಪಿಎಲ್ ಕಾರ್ಡ್ದಾರರು ಮತ್ತು ಆರೋಗ್ಯ ವಿಮೆ ಹೊಂದಿದವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಆಸ್ಪತ್ರೆಯಲ್ಲಿ ನುರಿತ ವೈದ್ಯರ ಸೇವೆ ಕಲ್ಪಿಸಲಾಗಿದೆ. ಆಸ್ಪತ್ರೆಗಳ ಸರ್ವೇಯ ಪ್ರಕಾರ ಜಿಲ್ಲೆಯಲ್ಲಿ ಪ್ರತಿ ತಿಂಗಳಲ್ಲಿ 400ರಿಂದ 500 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ಜೆಜೆಎಂ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಪ್ರಸಾದ್, ಕ್ಯಾನ್ಸರ್ ತಜ್ಞ ಡಾ.ಜಗದೀಶ್ ತುಬಚಿ ಹಾಜರಿದ್ದರು.