ತುಮಕೂರು:
ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಟಿಕೇಟ್ ನೀಡಿದ್ದು,ಯುವಜನರು ಇದನ್ನು ಅರ್ಥ ಮಾಡಿಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಂದಾಗುವಂತೆ ಕೆಪಿಸಿಸಿ ವಕ್ತಾರ ಹಾಗೂ ಕೌಶ್ಯಲಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಉಪ್ಪಾರಹಳ್ಳಿಯಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಸಂಸ್ಥೆಯ ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡುತಿದ್ದ ಅವರು,ನಮ್ಮ ಇಂದಿನ ಹೋರಾಟ ಮುಂಬರುವ ಲೋಕಸಭೆ ಹಾಗೂ ಆ ನಂತರ ಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಬೇಕು.ತುಮಕೂರು ಜಿಲ್ಲೆಯ ಜವಾಬ್ದಾರಿಯನ್ನು ಅಧ್ಯಕ್ಷರಾದ ಕೆಂಚಮಾರಯ್ಯ ಮತ್ತು ಉಪಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ವಹಿಸಿಕೊಂಡಿದ್ದು,ಇಲ್ಲಿನ ನಡೆಯುವ ಪ್ರತಿಯೊಂದು ಏರುಪೇರುಗಳು ಬೆಂಗಳೂರಿನ ಮೇಲೆ ಪ್ರಭಾವ ಬಿರುವುದರಿಂದ ನಾವು ಅತಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ ಎಂದರು.
ಎಐಸಿಸಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಅಧ್ಯಕ್ಷ ಮತ್ತು ಗೃಹ ಸಚಿವರು ಯುವಜನತೆಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಇದರ ಫಲವಾಗಿಯೇ ರಾಜ್ಯದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ75ರಷ್ಟು ಯುವ ಜನತೆಗೆ ಟಿಕೇಟ್ ನೀಡಿ, ರಾಜಕೀಯ ಅಧಿಕಾರದ ಜೊತೆಗೆ, ಪಕ್ಷ ಕಟ್ಟುವ ಜವಾಬ್ದಾರಿಯನ್ನು ನೀಡಿದ್ದಾರೆ.ಯುವಕರು ರಾಜ್ಯ ಸರಕಾರದ ವಿಚಾರಗಳಿಗೆ ತಲೆ ಕಡೆಸಿಕೊಳ್ಳುವ ಬದಲು ಕೇಂದ್ರದ ಜನವಿರೋಧಿ ನೀತಿಗಳ ಬಗ್ಗೆ ಜನರಿಗೆ ತಿಳಿಸುವ ಮೂಲಕ ಮತದಾರರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಬೇಕೆಂದು ಮುರುಳೀಧರ ಹಾಲಪ್ಪ ಮನವಿ ಮಾಡಿದರು.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರಮೋದಿ ಅವರು ಮಾಡಿರುವ ಒಂದೊಂದೆ ಹಗರಣಗಳು ಬೆಳಕಿಗೆ ಬರುತ್ತಲಿವೆ.ಪ್ರಮುಖವಾಗಿ ರೆಫಲ್ ಯುದ್ದವಿಮಾನ ಖರೀದಿ ಅತ್ಯಂತ ದೊಡ್ಡ ಮೊತ್ತದದ್ದಾಗಿದೆ. 40 ಸಾವಿರ ಕೋಟಿಯಿಂದ 1.50ಲಕ್ಷ ಕೋಟಿಯವರೆಗೆ ಇದರಲ್ಲಿ ಅವ್ಯವಹಾರ ನಡೆದಿದೆ.ಹೆಚ್.ಎಂ.ಟಿ. ಮುಚ್ಚಿದ ರೀತಿಯಲ್ಲಿಯೇ ಹೆಚ್.ಎ.ಎಲ್.ನನ್ನು ಮುಚ್ಚಲು ಮೋದಿ ಹುನ್ನಾರ ನಡೆಸಿದ್ದಾರೆ. ಇದರ ಫಲವಾಗಿಯೇ ಹೆಚ್.ಎ.ಎಲ್.ಗೆ ಸಿಗಬೇಕಿದ್ದ ಬಹು ಉಪಯೋಗಿ ಲಘು ಹೆಲಿಕ್ಯಾಪ್ಟರ್ ನಿರ್ಮಾಣದ ಗುತ್ತಿಗೆಯನ್ನು ಅವರ ಸ್ನೇಹಿತರಾದ ಅನಿಲ್ ಅಂಭಾನಿ ಅವರಿಗೆ ನೀಡಿ,ದೇಶದ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮುಗಿಸಲು ಹೊರಟಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷದ ಯುವ ಮುಂದಾಳುಗಳು ಜನರಿಗೆ ತಿಳಿಸುವ ಕೆಲಸ ಮಾಡಬೇಕೆಂದು ಹಾಲಪ್ಪ ನುಡಿದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ,ಮುಖಂಡರಾದ ಮುಸ್ತಾಕ್ ಅಹಮದ್,ಧರಣೇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ