ಬೆಂಗಳೂರು:
ಬನ್ನೇರುಘಟ್ಟ ಸಮೀಪದ ಬೆಟ್ಟದಲ್ಲಿ ಯುವಕನ ಕೈ ಕತ್ತರಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೈ ಕತ್ತರಿಸಲು ಪ್ರೇಯಸಿಯೇ ಸುಪಾರಿ ಕೊಟ್ಟಿರುವ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ.
ಪ್ರೇಯಸಿ ಜತೆ ಬನ್ನೇರುಘಟ್ಟಕ್ಕೆ ತೆರಳಿದ್ದಾಗ ಸಂಜೆ 5 ಗಂಟೆ ಸುಮಾರಿಗೆ ಸುಲಿಗೆ ನೆಪದಲ್ಲಿ ಬಂದ ಕೆಲವರು ಆತನ ಕೈ ಕಟ್ ಮಾಡಿ, ಅನುಮಾನ ಬರದೆ ಇರಲಿ ಎಂದು ಮೊಬೈಲ್ ಹಾಗೂ ಪರ್ಸ್ ಕಸಿದುಕೊಂಡು ಹೋಗಿದ್ದರು. ಘಟನೆ ವೇಳೆ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು.
ಇದಾದ ನಂತರ ರವೀಶ್ ಬನ್ನೇರುಘಟ್ಟ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ನಂಬಲಾರದ ಸತ್ಯವೊಂದು ತಿಳಿದುಬಂದಿದೆ. ವಿಚಾರಣೆ ವೇಳೆ ತಾನು ತಪ್ಪು ಮಾಡಿರುವುದಾಗಿ ರವೀಶ್ ಪ್ರೇಯಸಿ ಜಯಲಕ್ಷ್ಮಿ ತಪ್ಪೊಪ್ಪಿಕೊಂಡಿದ್ದಾರೆ.ಪ್ರಕರಣ ಸಂಬಂಧ ಬನ್ನೇರುಘಟ್ಟ ಪೊಲೀಸರು ಜಯಲಕ್ಷ್ಮಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಿನ್ನಲೆ:
ಮಧುಗಿರಿಯವರಾಗಿದ್ದ ಗಾಯಾಳು ರವೀಶ್ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ. 9 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರವೀಶ್ ತನ್ನ ಅಣ್ಣ ಶಿವಕುಮಾರ್ ಜತೆ ಅನೇಕಲ್ನ ಎರಂಡಹಳ್ಳಿಯಲ್ಲಿ ವಾಸವಾಗಿದ್ದ.
ರವೀಶ್ಗೆ ಜಯಲಕ್ಷ್ಮಿ ಎಂಬ ಮಹಿಳೆ ಪರಿಚಯವಾಗಿತ್ತು. ವೃತ್ತಿಯಲ್ಲಿ ಪೊಲೀಸ್ ಪೇದೆ ಯಾಗಿರುವ ಜಯಲಕ್ಷ್ಮಿ ಹಾಗೂ ರವೀಶ್ ನಡುವೆ ಪ್ರೀತಿ ಮೂಡಿತ್ತು. ಆದರೆ, ಪಾಲಕರು ಒಪ್ಪದ ಕಾರಣ ಇಬ್ಬರೂ ದೂರವಾಗಿದ್ದರು. ಈ ನಡುವೆ ಆಕೆಗೆ ಮತ್ತೊಬ್ಬನ ಜತೆ ವಿವಾಹವಾಗಿತ್ತು. ಸಾಂಸಾರಿಕ ಕಲಹದ ಕಾರಣ ಜಯಲಕ್ಷ್ಮಿ ಗಂಡನಿಂದಲೂ ದೂರಾಗಿ, ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.
ಈ ನಡುವೆ ಮತ್ತೆ ಹಳೆಯ ಪ್ರಿಯಕರ ರವೀಶ್ನೊಂದಿಗೆ ಗೆಳೆತನ ಮುಂದುವರಿದಿತ್ತು. ಈ ವೇಳೆ ಜಯಲಕ್ಷ್ಮಿ ತನ್ನನ್ನು ಮದುವೆಯಾಗು ಎಂದು ರವೀಶ್ ಅನ್ನು ಕೇಳಿದ್ದಾಳೆ. ಆದರೆ, ಆಕೆಗೆ ಮೊದಲೆ ಮದುವೆ ಆಗಿದ್ದರಿಂದ ರವೀಶ್ ಮದುವೆ ಮಾತು ತರದಂತೆ ಸೂಚಿಸಿದ್ದಾನೆ.
ಇದಕ್ಕೆ ಕೋಪಗೊಂಡ ಜಯಲಕ್ಷ್ಮಿ ರವೀಶ್ಗೆ ಸುಪಾರಿ ಕೊಟ್ಟು ಕೈ ಅಥವಾ ಕಾಲು ತೆಗೆಸಲು ನಿರ್ಧರಿಸಿದ್ದಳು. ಅಂಗವಿಕಲನಾದರೆ ಆತನನ್ನು ಯಾರು ಮದುವೆ ಆಗುವುದಿಲ್ಲ. ಆಗ ಬೇರೆ ದಾರಿಯಿಲ್ಲದೆ ತನ್ನ ಬಳಿ ಬರುತ್ತಾನೆ ಎಂದು ಊಹೆ ಮಾಡಿದ್ದಾರೆ. ಈ ಕೃತ್ಯ ಎಸಗಲು ಕೆಲವು ಯುವಕರಿಗೆ ಸುಪಾರಿ ನೀಡಿದ್ದಾರೆ. ಕೈ ಕತ್ತರಿಸಿದ ನಂತರ ಅಲ್ಲೆ ಬಿಡಬೇಡಿ ನೀವೆ ತೆಗೆದುಕೊಂಡು ಹೋಗಿ, ಇಲ್ಲದಿದ್ದರೆ ಚಿಕಿತ್ಸೆ ನೀಡಿ ಸರಿಪಡಿಸಬಹುದು ಎಂದು ಸೂಚಿಸಿದ್ದಾಳೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾಳೆ.