ತುರುವೇಕೆರೆ
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಜಿ ಪ್ರಧಾನಿ ದೇವೇಗೌಡರ ಗೆಲುವು ಅವಶ್ಯಕ. 3 ಲಕ್ಷಕ್ಕೂ ಅಧಿಕ ಮತಗಳಿಂದ ದೇವೇಗೌಡರ ಗೆಲುವು ನಿಶ್ಚಿತ, ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಗೌಡರಿಗೆ 1ಲಕ್ಷಕ್ಕೂ ಹೆಚ್ಚಿನ ಮತಗಳು ಬೀಳಲಿವೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಗ್ರಾಮದೇವತೆ ಉಡಸಲಮ್ಮ ದೇವಿಗೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಪೂಜೆ ಸಲ್ಲಿಸಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಪ್ರಾರ್ಥಿಸಿದರು. ನಂತರ ನೂರಾರು ಕಾರ್ಯಕರ್ತರೊಂದಿಗೆ ರೋಡ್ಶೋ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತಪ್ರಚಾರ ನಡೆಸಿ ಮಾತನಾಡಿದ ಅವರು, ಈಗಾಗಲೆ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಜಿಲ್ಲೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಚುನಾವಣೆಯಲ್ಲಿನ ಫಲಿತಾಂಶದಿಂದ ಮಾತ್ರ ಮತಗಳ ಅಂತರವನ್ನು ತಿಳಿಯಬೇಕಿದೆ. ತುರುವೇಕೆರೆ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರೆ ಸ್ಪರ್ಧಿಸಿರುವುದು ನಮ್ಮೆಲ್ಲರ ಸೌಭಾಗ್ಯ. ಆದ್ದರಿಂದ ತಾಲ್ಲೂಕಿನಿಂದ 1 ಲಕ್ಷಕ್ಕೂ ಅಧಿಕ ಮತಗಳು ದೇವೇಗೌಡರಿಗೆ ಬೀಳುವ ಮೂಲಕ ಗೆಲುವು ಸಾಧಿಸಲಿದ್ದಾರೆ. ಆದರೆ ಸ್ಥಳೀಯ ಶಾಸಕರು ಹಗಲುಗನಸು ಕಾಣುತ್ತಾ ಬಿಜೆಪಿ ಅಭ್ಯರ್ಥಿಪರ ಮತಪ್ರಚಾರಕ್ಕಿಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ನಾಲ್ಕು ಬಾರಿ ಸಂಸದರಾಗಿ ನಮ್ಮ ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯ, ನೀರಾವರಿ ವರದಿಯಾದ ಪರಮಶಿವಯ್ಯ ವರದಿಯನ್ನು ಅರ್ಧಕ್ಕೆ ನಿಲ್ಲಿಸಿದ ಸಾಧನೆ ಅವರದ್ದು. ಇಂತಹವರಿಂದ ಯಾವ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಚೌದ್ರಿ ರಂಗಪ್ಪ ಮಾತನಾಡಿ, ನಮ್ಮ ರಾಷ್ಟ್ರ ಹಾಗೂ ದೇಶದ ಸಂವಿಧಾನ ಉಳಿಯಬೇಕಾದರೆ ಈ ಚುನಾವಣೆ ಅತ್ಯವಶ್ಯಕವಾಗಿದೆ. ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಹೆಚ್.ಡಿ.ದೇವೇಗೌಡರನ್ನು ಬೆಂಬಲಿಸಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ವಿನಂತಿಸಿದರು.
ನೂರಾರು ಕಾರ್ಯಕರ್ತರು ಪಟ್ಟಣದಲ್ಲ್ಲಿ ಪ್ರಚಾರ ಕಾರ್ಯ ನಡೆಸಿದರು. ಪ್ರಚಾರ ಕಾರ್ಯಕ್ರಮದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರಸನ್ನಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ವಿಜಿಕುಮಾರ್, ನದೀಮ್, ಶ್ರೀನಿವಾಸ್, ಮುಖಂಡರಾದ ರಾಜೀವ್ಕೃಷ್ಣಪ್ಪ, ಶಿವರಾಜು, ನಂಜುಂಡಪ್ಪ, ಟಾಕಿಸ್ ಟಿ.ಕೆ.ಸತೀಶ್, ಶಿವರಾಜು, ಜಪ್ರುಲ್ಲ ನಜೀರ್ಅಹ್ಮದ್, ಶ್ರೀಕಾಂತರಾಜ್ಅರಸ್, ಬೋರೇಗೌಡ, ಎನ.ಆರ್.ಸುರೇಶ್, ಶಿವಣ್ಣ, ಬಸವರಾಜು ಸೇರಿದಂತೆ ಇತರ ಮುಖಂಡರುಗಳು ಪಾಲ್ಗೊಂಡಿದ್ದರು.