ತುಮಕೂರು:
ಬೆಂಗಳೂರಿನಲ್ಲಿ ಜನಸಾಂದ್ರತೆ ಹೆಚ್ಚಿದ್ದು ಪರ್ಯಾಯವಾಗಿ ತುಮಕೂರು ನಗರವನ್ನು ಅವಲಂಬನೆ ಮಾಡಲೇಬೇಕಿದೆ. ಹೀಗಾಗಿ ಮೆಟ್ರೊ ರೈಲನ್ನು ತುಮಕೂರು ನಗರದವರೆಗೂ ವಿಸ್ತರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ರವರು ತಿಳಿಸಿದ್ದಾರೆ.
ತುಮಕೂರು ಎಜುಕೇಶನ್ ಹಬ್ ಆಗಿ ಕೂಡ ಗುರ್ತಿಸಿಕೊಳ್ಳುತ್ತಿದೆ. ತುಮಕೂರಿಗೆ ಮೆಟ್ರೊ ರೈಲು ಯೋಜನೆಯನ್ನು ಕೂಡ ತರಬೇಕಾಗಿದೆ. ಜೊತೆಗೆ ತುಮಕೂರು ವೈಫೈ ಸಿಟಿ ಕೂಡ ಆಗುತ್ತಿದೆ ಎಂದು ತಿಳಿಸಿದ ಅವರು, 2006ರಲ್ಲಿಯೇ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಗರ ಪ್ರದೇಶಗಳಲ್ಲಿ ಐತಿಹಾಸಿಕ ಕಟ್ಟಡಗಳು, ಕಲ್ಯಾಣಿ, ರಸ್ತೆ ಮುಂತಾದವುಗಳ ರಕ್ಷಣೆಗೆ ಮುಂದಾಗಿದ್ದರು. ಇದನ್ನೇ ನರೇಂದ್ರ ಮೋದಿ ಸ್ಮಾರ್ಟ್ಸಿಟಿ ಹೆಸರಿನಲ್ಲಿ ಮುಂದುವರೆಸಿದ್ದಾರೆ. ಕೇಂದ್ರದಿಂದಲೇ ಶೇ.100 ಕ್ಕೆ 100 ರಷ್ಟು ಹಣ ಕೊಡಬಹುದಿತ್ತು. ಆದರೆ ರಾಜ್ಯ ಸರ್ಕಾರದ್ದು ಜವಾಬ್ದಾರಿ ಇರಲೆಂದು ಶೇ.50 ರಷ್ಟು ಹಣವನ್ನು ಮಾತ್ರ ಕೇಂದ್ರದಿಂದ ನೀಡಿ ಉಳಿದ ಶೇ.50ರಷ್ಟನ್ನು ರಾಜ್ಯ ಸರ್ಕಾರ ಭರಿಸುವಂತೆ ಮಾಡಿದ್ದಾರೆ ಎಂದರು.
ತುಮಕೂರು ನಗರದಲ್ಲಿ ರಸ್ತೆ ಹಾಗೂ ಚರಂಡಿಗಳಾಗಬೇಕು, ಚಿಕ್ಕಪೇಟೆ, ಬಾರ್ಲೈನ್ ರಸ್ತೆಗಳು ಇಂದಿಗೂ ಕಿರಿದಾಗಿವೆ. ನಗರದ ಮುಖ್ಯರಸ್ತೆಯೇ ಕಳಪೆಯಾಗಿದೆ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿಯೇ ತುಮಕೂರು ಅತೀ ಹೆಚ್ಚು ಹಿಂದುಳಿದಿದೆ. ಇಲ್ಲಿಯ ರಸ್ತೆ ಚರಂಡಿಗಳು ಅಭಿವೃದ್ಧಿಯಾಗಬೇಕಿವೆ ಎಂದು ಅವರು ಹೇಳಿದರು.
ಫುಡ್ಪಾರ್ಕ್, ಮೆಶಿನ್ ಟೂಲ್ಸ್, ಜಪಾನೀಸ್ ಕಂಪನಿ, ಎಚ್ಎಎಲ್ ಮತ್ತು ಇಸ್ರೋಯಿಂದಾಗಿ ತುಮಕೂರು ಜಾಗತಿಕವಾಗಿ ಗುರುತಿಸಿಕೊಳ್ಳುತ್ತಿದೆ. ನಷ್ಟದಲ್ಲಿದ್ದ ಎಚ್ಎಂಟಿ ಕೈಗಡಿಯಾರ ಕಾರ್ಖಾನೆಯನ್ನು ಮುಚ್ಚಿದ್ದು, ಆ ಭೂಮಿಯನ್ನು ಪ್ರತಿಷ್ಠಿತ ಇಸ್ರೋ ಸಂಸ್ಥೆಗೆ ವರ್ಗಾಯಿಸುವಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡರ ಶ್ರಮವಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ