ಹುಳಿಯಾರು
ವಿಶ್ವದ ಶ್ರೇಷ್ಠ ಹಾಕಿ ಪಟು ಧ್ಯಾನ್ ಚಂದ್ ಸಿಂಗ್ ರೀತಿ ದೇಶಪ್ರೇಮಿಗಳಾಗುವಂತೆ ವಿದ್ಯಾರ್ಥಿಗಳಿಗೆ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಕರೆ ನೀಡಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಶನಿವಾರ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟ-19 ರ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.
ವಿಶ್ವ ಕ್ರೀಡಾ ಇತಿಹಾಸದಲ್ಲಿ ಹಾಕಿಯಲ್ಲಿ ಧ್ಯಾನ್ ಚಂದ್ ಸಿಂಗ್ ಅವರನ್ನು ಸರಿಗಟ್ಟುವ ಯಾವ ಆಟಗಾರನೂ ಇಲ್ಲ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಅವರನ್ನೇ ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ ಧ್ಯಾನ್ ಚಂದ್. ಹಾಗಾಗಿಯೇ ಹಿಟ್ಲರ್ ಅವರು ಭಾರತ ಬಿಟ್ಟು ಜರ್ಮನ್ ಪ್ರತಿನಿಧಿಸುವಂತೆ ಧ್ಯಾನ್ ಚಂದ್ ಅವರಿಗೆ ವಿಶೇಷ ಸೌಲಭ್ಯ ಸಹಿತ ಆಫರ್ ನೀಡಿದ್ದರು. ಆದರೆ ಧ್ಯಾನ್ ಚಂದ್ ಮಾತ್ರ ನನ್ನ ಮಾತೃ ಭೂಮಿ ಬಿಟ್ಟು ಬೇರೆ ಯಾವ ದೇಶವನ್ನೂ ಏನೇ ಕೊಟ್ಟರೂ ಪ್ರತಿನಿಧಿಸಲಾರೆ ಎಂದು ಖಡಕ್ಕಾಗಿ ಹೇಳಿದ್ದರು. ಇದು ಅವರಲ್ಲಿನ ದೇಶಾಭಿಮಾನದ ಪ್ರತೀಕ ಎಂದರು.
ಕ್ರೀಡಾಕೂಟ ಉದ್ಘಾಟಿಸಿದ ಪಿಎಸ್ಐ ವಿಜಯ್ ಕುಮಾರ್ ಅವರು ಮಾತನಾಡಿ, ಕ್ರೀಡಾಕೂಟಗಳು ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಬೆಳೆಸುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಎಲ್ಲಾ ಕ್ಷೇತ್ರದಲ್ಲೂ ಗುರಿ ಸಾಧಿಸುವ ಸ್ಪೂರ್ತಿ ಸಿದ್ಧಿಸುತ್ತದೆ. ಬಹುಮುಖ್ಯವಾಗಿ ಓದಿನಲ್ಲೇ ಮಜ್ಞರಾಗುವ ಮಕ್ಕಳಿಗೆ ರಿಲ್ಯಾಕ್ಸ್ ಸಿಕ್ಕಿ ಮತ್ತೆ ಓದುವ ಚೈತನ್ಯ ಲಭಿಸುತ್ತದೆ. ಈ ನಿಟ್ಟಿನಲ್ಲಿ ಓದಿಗೆ ಕೊಟ್ಟಷ್ಟೆ ಉತ್ತೇಜನವನ್ನು ಕ್ರೀಡೆಗೂ ಕೊಡುವುದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದರು.
8 ನೇ ತರಗತಿ ವಿದ್ಯಾರ್ಥಿನಿ ಪ್ರಕೃತಿ ಅವರು ಮಾತನಾಡಿ, ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು ಕ್ರೀಡಾ ಸಾಧನೆಯಿಂದ ಹಣ, ಹೆಸರು, ಪದವಿ ಸಂಪಾದಿಸಬಹುದಾಗಿದೆ. ಅಲ್ಲದೆ ವ್ಯಕ್ತಿತ್ವ ವಿಕಸನಕ್ಕೂ ಕ್ರೀಡೆ ನೆರವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲೇ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆದು ಮುಂದೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಲಿತವಾಗಿ ಪರಿಹರಿಸಿಕೊಳ್ಳುವ ಶಕ್ತಿ ಮತ್ತು ಯುಕ್ತಿ ಬೆಳೆಯುತ್ತದೆ ಎಂದರು.
ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಕವಿತಾಕಿರಣ್, ಬೆಂಗಳೂರಿನ ತ್ರೀ ಸ್ಟೆಪ್ ಸ್ಪೋಟ್ರ್ಸ್ ಅಕಾಡೆಮಿಯ ನಿರ್ದೇಶಕ ಭೈರೆಗೌಡ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ