ಚಳ್ಳಕೆರೆ
ನಗರಸಭೆಯ 31 ವಾರ್ಡ್ಗಳಿಗೆ ಆಗಸ್ಟ್ 31ರಂದು ಮತದಾನ ನಡೆಯಲಿದ್ದು, ಈಗಾಗಲೇ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮನೆ ಮನೆಗೂ ಭೇಟಿ ನೀಡಿ ಮತದಾರರನ್ನು ಮತ ನೀಡುವಂತೆ ವಿನಂತಿಸಿಕೊಳ್ಳಲಾಗುತ್ತಿದೆ. ಬಹುತೇಕ ಎಲ್ಲಾ ಪಕ್ಷಗಳ ಅಭ್ಯರ್ಥಿಗಳೂ ಸಹ ತಮ್ಮ ಅಪಾರ ಬೆಂಬಲಿಗರೊಂದಿಗೆ ಪ್ರತಿ ಮನೆಗೂ ಭೇಟಿ ನೀಡಿ ಮತದಾರರನ್ನು ಒಲೈಸುವ ತಂತ್ರ ರೂಪಿಸುತ್ತಿದ್ದಾರೆ.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಲಭಿಸಲೇಬೇಕೆಂಬ ದೃಷ್ಠಿಯಿಂದ ಕಳೆದ 10 ದಿನಗಳಿಂದ ನಿರಂತರವಾಗಿ ಎಲ್ಲಾ ವಾರ್ಡ್ಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸುತ್ತಿದ್ದಾರೆ. ವಿಶೇಷವಾಗಿ ಬುಧವಾರ ಅವರು, ನಗರದ 13, 14, 15, 17, 18, 19, 21, 23, 24 ಮತ್ತು 26 ವಾರ್ಡ್ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಮತದಾರರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಕೆಪಿಸಿಸಿ ಅಧ್ಯಕ್ಷರು, ಸಂಸದ, ಜಿಲ್ಲಾ ಉಸ್ತುವಾರಿ ಸಚಿವರು, ಮಾಜಿ ಶಾಸಕರುಗಳು ಹಾಗೂ ಪಕ್ಷದ ಜಿಲ್ಲಾ ಘಟಕದ ಮುಖಂಡರು ಚಳ್ಳಕೆರೆಗೆ ಆಗಮಿಸಿ ಪ್ರತಿ ವಾರ್ಡ್ಗಳ ಮನೆ ಮನೆಗೂ ಭೇಟಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಈಗಾಗಲೇ ಒತ್ತಾಯ ಪಡಿಸಿದ್ಧಾರೆ. ಶಾಸಕರೂ ಸಹ ಮತದಾರರಿಗೆ ಪಕ್ಷದ ಚಿಹ್ನೆಯಾದ ಹಸ್ತಕ್ಕೆ ಮತ ನೀಡುವಂತೆ ವಿನಂತಿಸುತ್ತಿದ್ದು, ಚಳ್ಳಕೆರೆ ನಗರದ ಅಭಿವೃದ್ಧಿಗೆ ಕೈಗೊಂಡ ಹಲವಾರು ಯೋಜನೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡುವ ಮೂಲಕ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಷ್ಟ ಬಹುಮತ ಸಾಧಿಸುವ ದೃಷ್ಠಿಯಿಂದ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಪ್ರಚಾರ ಕಾರ್ಯದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿಕಲಾಕಂದಿಕೆರೆ ಸುರೇಶ್ಬಾಬು, ತಿಪ್ಪೇರುದ್ರಪ್ಪ, ಟಿ.ಪ್ರಭುದೇವ್, ಎಪಿಎಂಸಿ ಅಧ್ಯಕ್ಷ ಸಿ.ವೀರಭದ್ರಬಾಬು, ಸೂರನಹಳ್ಳಿ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ರಾಘವೇಂದ್ರ, ಅಭ್ಯರ್ಥಿಗಳಾದ ಜಿ.ಟಿ.ಗೋವಿಂದರಾಜು, ಎಂ.ಜೆ.ರಾಘವೇಂದ್ರ, ಕವಿತಾ ಪಿ.ಮೂರ್ತಿ, ಜಯಲಕ್ಷ್ಮಿ, ಸುಜಾತ, ಚಿನ್ನಮ್ಮ, ಎಂ.ಸಾವಿತ್ರಿ, ಆರ್.ಮಂಜುಳಾ, ಎಚ್.ಸಿ.ವಿರೂಪಾಕ್ಷ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ