ಮಡಿಕೇರಿ:
ಇಲ್ಲಿನ ಬ್ರಾಹ್ಮಣ ಸಮುದಾಯ ಕೇಂದ್ರದ ಪರಿಹಾರ ಕೇಂದ್ರಕ್ಕೆ, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿ ಸಂತ್ರಸ್ತರಿಂದ ಮಾಹಿತಿ ಸಂಗ್ರಹಿಸಿದರು.
ಹಿಂದಿ ಭಾಷೆಯಲ್ಲಿಯೇ ತಮ್ಮ ಸಮಸ್ಯೆಗಳನ್ನು ಬಿಚ್ಚಿಡಲು ಪ್ರಯತ್ನಿಸುತ್ತಿದ್ದ ಸಂತ್ರಸ್ತರನ್ನು ಕಂಡ ರಕ್ಷಣಾ ಸಚಿವರು ಕನ್ನಡದಲ್ಲಿಯೇ ತಮ್ಮ ಸಮಸ್ಯೆಗಳನ್ನು ಹೇಳಿ ಎಂದ ಅವರು ನನಗೂ ಕನ್ನಡ ಭಾಷೆ ಮಾತನಾಡಲು ಬರುತ್ತದೆ ಎಂದು ಹೇಳಿ, ಕನ್ನಡದಲ್ಲಿಯೇ ತಮ್ಮ ಸಮಸ್ಯೆ ಆಲಿಸುವುದಾಗಿ ತಿಳಿಸಿದರು. ಮಹಾಮಳೆಯಿಂದ ಅಪಾರ ಹಾನಿಗೊಳಗಾದ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು, ನಿಮ್ಮ ಜತೆ ನಾವಿದ್ದೇವೆ, ನಿಮಗೆ ಬದುಕು ಕಟ್ಟಿಕೊಡುವ ಪ್ರಯತ್ನವನ್ನು ನಾವೆಲ್ಲರೂ ಮಾಡುವುದಾಗಿ ತಿಳಿಸಿದರು. ಈಗಲೂ ಕೂಡಾ ಬದುಕು ಕಟ್ಟಿಕೊಡುವ ಭರವಸೆ ನೀಡಿದರು. ಮಡಿಕೇರಿ ಜಿಲ್ಲಾಡಳಿತದ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿ ಸಂಗ್ರಹಿಸಿದರು.ಈ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಾಣಹಾನಿ, ಮನೆಹಾನಿ ಮತ್ತು ಬೆಳೆ ಹಾನಿಗೆ ಸಂಬಂದಿಸಿದಂತೆ ಸಮಗ್ರ ಮಾಹಿತಿಯನ್ನು ಸಚಿವರಿಗೆ ನೀಡಿ ವಿವರಿಸಿದರು.
ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಕೊಡಗು ಜಿಲ್ಲೆಯ ಪ್ರವಾಹ ಪರಿಸ್ಥಿತಿ ಕುರಿತು, ಹಾಗೂ ಹಾನಿ ಪ್ರಮಾಣದ ಬಗ್ಗೆ ಸಮಗ್ರ ವಿವರಣೆ ನೀಡಿದರು,ಈ ಸಂದರ್ಭದಲ್ಲಿ ಸಚಿವ ಸಾ.ರಾ.ಮಹೇಶ್ ಅವರು ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.
ಸಂಸದರ ನಿಧಿಯಿಂದ 1 ಕೋಟಿ ನೆರವು:
ಸಂಸದರ ನಿಧಿಯಿಂದ ಕೊಡಗು ಸಂತ್ರಸ್ತರಿಗೆ 1 ಕೋಟಿ ರೂ.ಗಳ ನೆರವು ನೀಡುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಕ್ಷಣಾ ಇಲಾಖೆಯ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ರಕ್ಷಣಾ ಕಾರ್ಯಕ್ಕೆ 7 ಕೋಟಿ ರೂ.ಗಳನ್ನು ನೀಡುವುದಾಗಿ ಅವರು ತಿಳಿಸಿದರು. ನಂತರ ಹೆದ್ದಾರಿ ನಿರ್ಮಾಣ ಕುರಿತಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರ ವಿರುದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಅಸಮಧಾನ ವ್ಯಕ್ತ ಪಡಿಸಿ,ನಿಮಗೆ ಕಾರ್ಯಕ್ರಮದ ಬಗ್ಗೆ ಶಿಷ್ಟಾಚಾರ ತಿಳಿದಿದೆಯೋ, ಇಲ್ಲವೋ ಎಂದು ಸಾ.ರಾ. ಮಹೇಶ್ ವಿರುದ್ದ ಹರಿಹಾಯ್ದರು. ಜಿಲ್ಲಾಧಿಕಾರಿ ಮತ್ತು ಸಾ.ರಾ.ಮಹೇಶ್ ಗೊಂದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ದ ಸಿಡಿಮಿಡಿಗೊಂಡು, ನಾನು ಜಿಲ್ಲಾ ಉಸ್ತುವಾರಿ ಸಚಿವರ ಮಾತು ಕೇಳಬೇಕಾ ಎಂದು ಪ್ರಶ್ನಿಸಿದರು. ನಿಮ್ಮೀರ್ವರಲ್ಲಿ ಭಿನ್ನಾಭಿಪ್ರಾಯವಿದ್ದರೆ, ಮೊದಲೇ ಸರಿಪಡಿಸಿಕೊಳ್ಳಿ ಎಂದ ಅವರು, ಪ್ರತಿ ನಿಮಿಷದ ಕಾರ್ಯಕ್ರಮದ ಪಟ್ಟಿಯಂತೆ ನಾನು ಹೋಗುತ್ತಿದ್ದೇನೆ, ಮೊದಲು ಪ್ರತಿನಿಮಿಷದ ಪಟ್ಟಿಯನ್ನು ಮಾಡಬೇಕು ಎಂದು ಹೇಳಿದರು.