ಭಾರತದ ಭಾಗ್ಯಶಿಲ್ಪಿ ಸರ್.ಎಂ. ವಿಶ್ವೇಶ್ವರಯ್ಯ

       Related imageಒಬ್ಬ ಬಡ ವಿದ್ಯಾರ್ಥಿ. ಅವನು ಮೆಟ್ರಿಕ್ ಪರೀಕ್ಷೆಗೆ ಕುಳಿತಿದ್ದ. ಪರೀಕ್ಷಾ ಶುಲ್ಕ ತೆರಲು ಅವನ ಕೈಯಲ್ಲಿ ಹಣವಿಲ್ಲ. ಅಂತಹ ಸಂದಿಗ್ಧ ಸಮಯದಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದಲ್ಲಿದ್ದ ತನ್ನ ಮನೆಗೆ ನಡೆದುಕೊಂಡೇ ಹೋದ ಮನೆಯಲ್ಲಾದರೂ ಹಣ ಎಲ್ಲಿತ್ತು? ತಾಯಿ ಮನೆಯಲ್ಲಿದ್ದ ಪಾತ್ರೆಗಳನ್ನು ಶೆಟ್ಟರ ಅಂಗಡಿಯಲ್ಲಿ ಅಡವಿಟ್ಟು ಮಗನಿಗೆ ಕೊಟ್ಟಿದ್ದು ಕೇವಲ ಹನ್ನೆರಡು ರೂಪಾಯಿ ಅದನ್ನು ಬಳಸಿಕೊಂಡು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದ ಆ ಹುಡುಗನ ಭೀಮಶಕ್ತಿ, ಅತ್ಯಪೂರ್ವ ಮನೋಬಲ, ಹಿಡಿದಿದ್ದನ್ನು ಸಾಧಿಸಲೇಬೇಕೆಂಬ ಛಲ ಅನುಕರಣೀಯ. ನಾವು ನೀವು ಊಹಿಸಲು ಸಾಧ್ಯವಿಲ್ಲದ ಹಿಮಾಲಯದಷ್ಟು ಎತ್ತರದ ಸಾಧನೆಮಾಡಿದ ಆತನೇ …… ಅವರೇ ನಮ್ಮ ರಾಷ್ಟ್ರದ ಸರ್ವೋಚ್ಛ ನಾಗರೀಕ ಪ್ರಶಸ್ತಿ “ಭಾರತರತ್ನ” ವನ್ನು ಪಡೆದ ಪ್ರಪಥಮ ಕನ್ನಡಿಗ. ಜನರು ಪ್ರೀತಿಯಿಂದ ಸರ್.ಎಂ.ವಿ. ಎಂದೂ ಚುಟುಕಾಗಿ ಕರೆಯುತ್ತಿದ್ದ, ವಿಶ್ವಕಂಡ ಮಹೋನ್ನತ ಸಿವಿಲ್ ಇಂಜಿನಿಯರ್ ಮತ್ತು ದಕ್ಷ ಆಡಳಿತಗಾರ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.

 ಬಾಲ್ಯ ವಿದ್ಯಾಭ್ಯಾಸ :-Related image

      ಹಿರಿಯ ಚೇತನ ಸರ್.ಎಂ. ವಿಶ್ವೇಶ್ವರಯ್ಯ 1861 ಸೆಪ್ಟೆಂಬರ್ 15 ರಂದು ಕೋಲಾರ ಜಿಲ್ಲೆ ಚಿಕ್ಕಬಳ್ಳಾಪುರ ತಾಲ್ಲೋಕಿನ ಮುದ್ದೇನಹಳ್ಳಿಯ ಸುಸಂಸ್ಕøತ ಮನೆತನವಾದ ಮಲಕನಾಡು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಶ್ರೀನಿವಾಸಶಾಸ್ತ್ರಿ, ತಾಯಿ ವೆಂಕಾಜಮ್ಮ. ಪ್ರಾರಂಭದ ವಿದ್ಯಾಭ್ಯಾಸ ಚಿಕ್ಕಬಳ್ಳಾಪುರದಲ್ಲೇ ನಡೆಯಿತು. ಹೈಯರ್ ಸೆಕೆಂಡರಿ ಮುಗಿಸಿದ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೈಸೂರು ರಾಜ್ಯದಲ್ಲಿ ಅತಿ ಹೆಚ್ಚು ಅಂಕ ಪಡೆದರು, ಮುಂದೆ ಮದರಾಸು ವಿಶ್ವವಿದ್ಯಾಲಯದ ಬಿ.ಎ., ಪರೀಕ್ಷೆಯಲ್ಲಿ ಪ್ರಥಮ ದರ್ಜೆ ತೇರ್ಗತೆ ಹೊಂದಿ, ಪುಣೆ ವಿಜ್ಞಾನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ, ಮುಂಬೈನಲ್ಲಿ ಐ.ಅ.ಇ. ಮತ್ತು ಇ.ಅ.ಇ.ಐ.ನಲ್ಲಿ ಮುಂಬೈ ಪ್ರಾಂತ್ಯಕ್ಕೆ ಪ್ರಥಮ ಸ್ಥಾನ ಪಡೆದರು.

ಸಾಧನೆಯ ಹಾದಿಯಲ್ಲಿ :-

Image result for vishweshwaraiah

      1884 ರಲ್ಲಿ ಉದ್ಯೋಗಕ್ಕೆ ಸೇರಿದ ಸರ್.ಎಂ.ವಿ. ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಅಭಿಯಂತರರಾಗಿ ನಂತರ 1907 ರಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಆದರು, ನಂತರ 1908 ಬಹುಬೇಗ ಮುಖ್ಯ ಇಂಜಿನಿಯರ್ ಆಗುವ ಎಲ್ಲಾ ಅರ್ಹತೆಗಳು ಅವರಲ್ಲಿದ್ದವು. ಆ ಹುದ್ದೆ ಆಕಾಲದಲ್ಲಿ ಬ್ರಿಟಿಷರಿಗಷ್ಟೇ ಮೀಸಲಾಗಿತ್ತು. ಮಹಾ ಸ್ವಾಭಿಮಾನಿಯಾಗಿದ್ದ ವಿಶ್ವೇಶ್ವರಯ್ಯನವರು 1908 ರಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದರು. ನಂತರ ಅವರು ನಡೆದ ದಾರಿ, ಮಾಡಿದ ಸಾಧನೆ ಏರಿದ ಎತ್ತರ ಎಲ್ಲವು ಒಂದು ಯಶೋಗಾಥೆಯೇ. ಮುಂದೆ ಅವರು ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿ 1912ರ ವರೆಗೆ ಕಾರ್ಯ ನಿರ್ವಹಿಸಿದರು. ಈ ಅವಧಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಅಣೆಕಟ್ಟು ಕಟ್ಟಿದ್ದು ಅವರ ಮಹತ್ಸಾದನೆ.

 ದಿವಾನರಾಗಿ ವಿಶ್ವೇಶ್ವರಯ್ಯ :

Related image

      1912 ರಿಂದ 1918ರ ವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿ ಮಾಡಿದಷ್ಟು ಕೆಲಸಗಳನ್ನು ಬೇರಾರು ಮಾಡಲೇ ಇಲ್ಲ. ಅವರೊಬ್ಬರೇ ವೈಶಿಷ್ಟ್ಯಪೂರ್ಣವಾದ ಕೆಲಸಗಳನ್ನು ಮಾಡಿ ಕರ್ತವ್ಯಪರತೆ, ಸರಳತೆ, ಸಾಮಾನ್ಯ ಜನರು ಹಾಗೂ ರೈತರ ಬಗ್ಗೆ ಅವರಿಗಿದ್ದ ಕಾಳಜಿ ತುಡಿತ ಅದ್ವಿತೀಯವಾದದ್ದು.

ಸಾಧನೆಯ ಮಹಾಪೂರ :

      ದಿವಾನರಾಗಿದ್ದ ದಿನಗಳಲ್ಲಿ ಸ್ಥಾಪಿಸಿದ ಪ್ರತಿಯೊಂದು ಸಂಸ್ಥೆಯ ಉದ್ಯಮವು ಇಂದು ಹೆಮ್ಮರದಂತೆ ಬೆಳೆದು ನಾಡಿನ ಹೆಮ್ಮೆಯ ಪ್ರತೀಕವೆನಿಸಿದೆ. (1) ಶಿವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಆರಂಭ, (2) ಹೆಬ್ಬಾಳದಲ್ಲಿ ಕೃಷಿ ಶಾಲೆ, (3) ಮೈಸೂರು ಬ್ಯಾಂಕ್, (4) ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ತಾಂತ್ರಿಕ ಶಾಲೆ, (5) ಮೈಸೂರು ವಿಶ್ವವಿದ್ಯಾಲಯ, (6) ಕನ್ನಡ ಸಾಹಿತ್ಯ ಪರಿಷತ್, (7) ಬೆಂಗಳೂರು ಮುದ್ರಣಾಲಯ, ಪುರಸಭೆ (8) ರೇಷ್ಮೆ, ಸಾಬೂನು, ಗಂಧದ ಎಣ್ಣೆ ಮತ್ತು ಚರ್ಮೋದ್ಯಮಗಳ ಪ್ರಾರಂಭ, (9) ಭದ್ರಾವತಿ ಉಕ್ಕಿನ ಕಾರ್ಖಾನೆ, (1)) ಶ್ರೀಜಯಚಾಮರಾಜೇಂದ್ರ ತಾಂತ್ರಿಕ ಶಾಲೆ, (11) ಛೇಂಬರ್ ಆಫ್ ಕಾಮರ್ಸ್, ಸೆಂಚುರಿ ಕ್ಲಬ್, ವಿಶ್ವೇಶ್ವರಯ್ಯನವರ 6 ವರ್ಷಾವಧಿಯ ಸೇವೆಗೆ ಸಲ್ಲಬೇಕಾಗಿದ್ದ ಒಟ್ಟು ಮೊತ್ತ 2.00 ಲಕ್ಷ ಆ ಹಣದಲ್ಲಿ ಬಿಡಿಗಾಸನ್ನೂ ಪಡೆಯಲಿಲ್ಲ. ತತ್ಪಲವಾಗಿ 1929ರಲ್ಲಿ ಬೆಂಗಳೂರು ನಗರದ ಕೆ.ಆರ್. ವೃತ್ತದಲ್ಲಿ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಸಂಸ್ಥೆ ಸ್ಥಾಪಿಸಿದರು.

ಕೃಷ್ಣರಾಜಸಾಗರ ಜಲಾಶಯ :Image result for vishweshwaraiah krs dam

      ಸರ್.ಎಂ.ವಿ. ರವರ ಮೇರು ಸದೃಶ ಕಾರ್ಯ, ಇಂದು ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರುಣಿಸಬಲ್ಲ, ಲಕ್ಷಾಂತರ ಕುಟುಂಬಗಳ ಜೀವನಾಡಿಯೆನಿಸಿದ ಕಾವೇರಿ ನದಿಯ ನೀರನ್ನು ಮೈಸೂರು, ಮಂಡ್ಯ ಜಿಲ್ಲೆಗಳ ರೈತರ ಸದ್ವಿನಿಯೋಗಕ್ಕಾಗಿ ರೂಪಿಸಿದ್ದು 1911ರ ಬೃಹತ್ ಯೋಜನೆ ಇದು ಪೂರ್ಣಗೊಂಡಿದ್ದು 1931ರಲ್ಲಿ. ಸಿಮೆಂಟು ಕಬ್ಬಿಣಕ್ಕೆ ಬದಲಾಗಿ ಕೇವಲ ಸುಣ್ಣ ಮತ್ತು ಬೆಲ್ಲ ಅರೆದು ತಯಾರಿಸಿದ ಸುರ್ಕಿಗಾರೆಯಿಂದ ಈ ಅಣೆಕಟ್ಟನ್ನು ನಿರ್ಮಿಸಲಾಯಿತು. ಈ ಅಣೆಕಟ್ಟನ್ನು ಅಪಾಯದಿಂದ ರಕ್ಷಿಸುವುದಕ್ಕಾಗಿ 163 ಕವಾಟಗಳುಳ್ಳ ತೂಬುಗಳ ಮೂಲಕ ನೀರನ್ನು ಹೊರಬಿಡುವ ವ್ಯವಸ್ಥೆ ಕೂಡ ಮಾಡಿದ್ದರು. ಇಂದು ನಾವು ಮೈಸೂರು, ಮಂಡ್ಯ ಭಾಗಗಳಲ್ಲಿ ಹಸಿರು ನಳನಳಿಸುವುದನ್ನು ನೋಡುತ್ತಿದ್ದೇವೆ. ಆ ಭಾಗದ ರೈತರು ಸಾಮಾಜಿಕವಾಗಿ, ಆರ್ಥಿಕವಾಗಿ ಸಾಕಷ್ಟು ಮುಂದುವರಿದಿದ್ದಾರೆ. ಅದಕ್ಕೆ ಕಾರಣರಾದ ಸರ್.ಎಂ.ವಿ. ಪ್ರಾತಃಸ್ಮರಣೀಯರು. ಇದಲ್ಲದೆ ಶರಾವತಿ ಜಲವಿದ್ಯುತ್ ಯೋಜನೆ, 1913 ರಲ್ಲಿ ಮೈಸೂರಿಗೆ ರೈಲು ಮಾರ್ಗ ಯೋಜನೆ ಹೀಗೆ ಹಲವಾರು. ಸರ್.ಎಂ.ವಿ. ಬಗ್ಗೆ ನಮ್ಮ ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ ಜೆ.ಆರ್.ಡಿ. ಟಾಟಾ ಅವರಿಗೂ ವಿಶೇಷ ಗೌರವ. ಟಾಟಾರವರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಆಡಳಿತ ಮಂಡಳಿಗೆ ಎಂ.ವಿ. ರವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಂಡರು.

ಹಿಂದೂಸ್ಥಾನ್ ಏರೋನಾಟಿಕ್ಸ್ :

Image result for hindustan aeronautics

      1930-40ರ ದಶಕದಲ್ಲಿ ವಿದೇಶಗಳಲ್ಲಿ ವ್ಯಾಪಕವಾಗಿ ಸಂಚರಿಸಿದ್ದ ಸರ್.ಎಂ.ವಿ. ರವರಿಗೆ ಭಾರತದಲ್ಲಿ ಮೋಟಾರು ವಾಹನ ತಯಾರಿಸುವಂತಹ ಕಾರ್ಖಾನೆ ಸ್ಥಾಪಿಸುವ ಅಭಿಲಾಷೆಯಾಯಿತು. ಉದ್ಯಮಿ ಲಾಲ್‍ಚಂದ್ ಹಿರಾಚಂದ್ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೈಸೂರು ಸಂಸ್ಥಾನದ ಪರವಾಗಿ ಅಂಥದೊಂದು ಕಾರ್ಖಾನೆ ಸ್ಥಾಪಿಸಲು ಮುಂದಾದರು. ಭಾರತದ ಮೊತ್ತಮೊದಲು ವಿಮಾನ ತಯಾರಿಕೆ ಹಾಗೂ ರಿಪೇರಿ ಕಾರ್ಖಾನೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಯಿತು.

ಸ್ತ್ರೀಯರ ಹಿತಾಭಿವೃದ್ಧಿಗೆ ಕಾಯಕಲ್ಪ :Related image

      ಮಹಿಳೆಯರಿಗೆ ಉನ್ನತ ಶಿಕ್ಷಣ ದೊರಕುವಂತಾಗಬೇಕು ಎಂಬುದು ಸರ್.ಎಂ.ವಿ. ಅಭಿಪ್ರಾಯ. 1917 ರಲ್ಲಿ ಮೈಸೂರು ಮಹಾರಾಣಿ ಕಾಲೇಜನ್ನು ಪ್ರಾರಂಭಿಸಿದರು ಮತ್ತು ಅದನ್ನು ಪ್ರಥಮ ದರ್ಜೆಗೆ ಏರಿಸಿ ಬಿ.ಎ., ಪದವಿ ಪಡೆಯುವ ಅವಕಾಶ ಕಲ್ಪಿಸಿದರು. ಮಹಿಳೆ ಎಂದರೆ ಪುರುಷರ ಅಡಿಯಾಳಲ್ಲ, ಮನೆಕೆಲಸ ಒಂದೇ ಅವಳ ಜೀವನದ ಪರಮಗುರಿಯಲ್ಲ, ಅವಳಿಗೂ ಹಿಡಿದ ಕೆಲಸವನ್ನು ಸಾಧಿಸುವ ಶಕ್ತಿ ಸಾಮರ್ಥ್ಯ ಇದೆ ಎಂದು ಮನಗಂಡಿದ್ದರು. ಶಿಕ್ಷಣ, ಉದ್ಯೋಗ, ತರಬೇತಿ, ಸಾಹಿತ್ಯ, ಸಂಸ್ಕೃತಿ, ಕಲೆ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಯಾವುದೇ ತಾರತಮ್ಯವಾಗಲೀ, ಸಂಕುಚಿತ ಮನೋಭಾವವಾಗಲೀ ಇರದೆ ಸಮಾನ ಅವಕಾಶ ದೊರೆಯುವಂತಾಗಬೇಕು. ಎಂದು 1913ರಲ್ಲಿ ಬೆಂಗಳೂರಿನ ಮಹಿಳಾ ಸಮಾಜದ ಕಟ್ಟಡಕ್ಕೆ ನಿವೇಶನ, ಅದಕ್ಕೆ ಆರ್ಥಿಕ ನೆರವನ್ನು ಸಹ ಕೊಡಿಸಿದರು. ಇಂದು ಬೃಹತ್ತಾಗಿ ಸಂಸ್ಥೆಯು ಬೆಳೆದಿದೆ.

ದಣಿವರಿಯದ ಆರ್ಥಿಕ ತಜ್ಞ :

Related image

      ಅವರೊಬ್ಬ ಆರ್ಥಿಕ ತಜ್ಞರು ಆಗಿದ್ದರೆಂಬುದಕ್ಕೆ ಅವರು ಸ್ಥಾಪಿಸಿದ ಎಸ್.ಬಿ.ಎಂ. ಜ್ವಲಂತಸಾಕ್ಷಿ ಇಂದು ಎಸ್.ಬಿ.ಐ. ನಲ್ಲಿ ವಿಲೀನಗೊಂಡು ಬೃಹತ್ ಬ್ಯಾಂಕಿಂಗ್ ಉದ್ಯಮವಾಗಿ ಬೆಳೆದು ಲಕ್ಷಾಂತರ ಜನರಿಗೆ ಉದ್ಯೋಗ, ಸ್ವ-ಉದ್ಯೋಗ ಕಲ್ಪಿಸಿದೆ. ಅವರು ಬರೆದ ಸುಮಾರು 16 ಪುಸ್ತಕ ಇಂಗ್ಲಿಷ್‍ನಲ್ಲಿ ಮುದ್ರಣಗೊಂಡು ಅಂತರಾಷ್ಟ್ರೀಯ ಮನ್ನಣೆಗಳಿಸಿದೆ.

ಪ್ರಶಸ್ತಿ ಪುರಸ್ಕಾರಗಳು :

Related image

      1883 ರಲ್ಲಿ ಜೇಮ್ಸ್ ಬರ್ಕಲೇ ಪ್ರಶಸ್ತಿ, 1904 ಲಂಡನ್ ಸಿವಿಲ್ ಇಂಜಿನಿಯರಿಂಗ್ ಸಂಸ್ಥೆಯ ಗೌರವ ಸದಸ್ಯತ್ವ, ಏಡನ್ ನಗರದ ನೀರು ಸರಬರಾಜು ವ್ಯವಸ್ಥೆ ರೂಪಿಸಿಕೊಟ್ಟ ಸಲುವಾಗಿ ಕೈಸರ್-ಎ-ಹಿಂದ್ ಪ್ರಶಸ್ತಿ. 1911 ರಲ್ಲಿ ದೆಹಲಿ ದರ್ಬಾರ್‍ನಿಂದ ಕಂಪೇನಿಯನ್ ಆಫ್ ಇಂಡಿಯನ್ ಎಂಪೈರ್ ಪ್ರಶಸ್ತಿ, 1921 ಕಲ್ಕತ್ತ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಸೈನ್ಸ್ ಪ್ರಶಸ್ತಿ, 1937 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಗೌರವ. 1955 ರಂದು ಭಾರತ ಸರಕಾರ ನೀಡುವ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ “ಭಾರತರತ್ನ ಪ್ರಶಸ್ತಿ” ಪ್ರಧಾನ ಹೀಗೆ ಹತ್ತು ಹಲವಾರು ಉನ್ನತ ಪ್ರಶಸ್ತಿಗಳು ಅವರಿಗೆ ದೊರೆತು ಘನತೆ ಹೆಚ್ಚಿಸಿಕೊಂಡಿವೆ.

 

      101 ವರ್ಷ ಬದುಕಿದ್ದ ಸರ್.ಎಂ.ವಿ. ತಮ್ಮ ತಂದೆಯ ಶ್ರಾದ್ಧದ ದಿನವೇ ಇಹಲೋಕ ತ್ಯಜಿಸಿದರು. ಆಂಗ್ಲ ಪತ್ರಿಕೆಯೊಂದು ಸಮೀಕ್ಷೆ ನಡೆಸಿ ಶತಮಾನದ 3 ಶ್ರೇಷ್ಠ ಭಾರತೀಯರನ್ನು ಗುರುತಿಸಿತು. ಅದರಲ್ಲಿ ಮಹಾತ್ಮ ಗಾಂಧಿ, ಗುರದೇವ ರವೀಂದ್ರನಾಥ ಟ್ಯಾಗೂರ್, ಸರ್.ಎಂ. ವಿಶ್ವೇಶ್ವರಯ್ಯ.

      ಅಭಿನವ ಭಗೀರಥರಾಗಿ ಹೆಸರು ಪಡೆದಿದ್ದ ಸರ್.ಎಂ.ವಿ. ಮಾಡಿದ ಸಾಧನೆ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಅಂಥವರು ಜನರ ಮನದಿಂದ ಎಂದೂ ದೂರವಾಗಲಾರರು ಎಂಬುದಕ್ಕೆ ಪ್ರತಿಯೊಂದು ಸರ್ಕಾರಿ ಇಲಾಖೆಗಳಲ್ಲಿ (ವಿಶೇಷವಾಗಿ ಲೋಕೋಪಯೋಗಿ) ಮನೆಗಳಲ್ಲಿ ಅವರ ಫೋಟೋ ಇರುವುದು ನೋಡಬಹುದು. ಸರ್.ಎಂ.ವಿ.ಯವರು ಮತ್ತೆ ಮತ್ತೆ ಹುಟ್ಟಿ ಬರಲೆಂಬ ಆಶಯ.

Recent Articles

spot_img

Related Stories

Share via
Copy link
Powered by Social Snap