ಚಳ್ಳಕೆರೆ
ರಾಷ್ಟ್ರದ ಪ್ರತಿಯೊಬ್ಬ ನಾಗರೀಕರಲ್ಲೂ ‘ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ’ ಎಂಬ ದೇಶ ಭಕ್ತಿ ಗೀತೆಯೊಂದಿಗೆ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಕೀರ್ತಿ ಮಹಾತ್ಮ ಗಾಂಧೀಜಿಯವರದ್ದು, ಸರಳ, ಸಜ್ಜನಿಕೆ ವ್ಯಕ್ತಿಯಾದ ಅವರು ಅಹಿಂಸಾ ಮಾರ್ಗದ ಮೂಲಕ ರಾಷ್ಟ್ರದಲ್ಲಿ ಸ್ವಾತಂತ್ರ್ಯ ಜ್ಯೋತಿಯನ್ನು ಬೆಳಗಿದವರು. ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಜನರು ಗಾಂಧಿ ತತ್ವಾದರ್ಶಗಳನ್ನು ನೆನಪಿಸಿಕೊಳ್ಳಲು ಸರ್ಕಾರ ಅವರ ಸಾಧನೆಗಳ ಸ್ತಂಭ ಚಿತ್ರದ ಮೂಲಕ ಜನರಲ್ಲಿ ಜಾಗೃತಿ ಉಂಟು ಮಾಡುತ್ತಿರುವುದು ಸ್ವಾಗತಾರ್ಹವೆಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಅವರು, ಮಂಗಳವಾರ ಬಿ.ಎಂ.ಸರ್ಕಾರಿ ಪ್ರೌಢಶಾಲೆ ಮುಂಭಾಗದಲ್ಲಿ ಚಿತ್ರದುರ್ಗದಿಂದ ಆಗಮಿಸಿದ ಮಹಾತ್ಮ ಗಾಂಧೀಜಿಯವರ 150ಗೆ ಜನ್ಮ ದಿನಾಚರಣೆಯ ಸ್ತಂಭ ಚಿತ್ರದ ಜಾಗೃತಿ ರಥವನ್ನು ಸ್ವಾಗತಿಸಿ ಮಾತನಾಡಿದರು. ಸಾರ್ವಜನಿಕರು ಈ ಸ್ತಂಭ ಚಿತ್ರವನ್ನು ವೀಕ್ಷಿಸಿದಲ್ಲಿ ಗಾಂಧೀಜಿಯವರ ನೈಜ್ಯ ಹೋರಾಟ ಸ್ಥಿತಿಯನ್ನು ಮತ್ತಷ್ಟು ತಿಳಿಯಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾತನಾಡಿ, ಗಾಂಧೀಜಿ ಒಬ್ಬರೇ ಈ ರಾಜ್ಯದ ರಾಷ್ಟ್ರಪಿತನೆಂಬ ಹೆಗ್ಗಳಿಕೆ ಎಲ್ಲಾ ರೀತಿಯಿಂದಲೂ ಸಮಂಜಸವಾಗಿದೆ. ಸ್ವಾತಂತ್ರ್ಯದ ಪೂರ್ವದಲ್ಲಿ ಬಿಟ್ರೀಷರು ನಮ್ಮ ಮೇಲೆ ನಡೆಸುತ್ತಿದ್ದ ಅವಮಾನ, ದಬ್ಬಾಳಿಕೆಯ ವಿರುದ್ದ ಅಹಿಂಸಾ ತತ್ವದ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟ ಹೆಗ್ಗಳಿಕೆ ಮಹಾತ್ಮ ಗಾಂಧೀಜಿಯವರದ್ದು ಎಂದರು.
ಈ ಸಂದರ್ಭದಲ್ಲಿ ಬಿ.ಎಂ.ಸರ್ಕಾರ ಶಾಲೆ ಮುಖ್ಯೋಪಾಧ್ಯಾಯ ಸಂಪತ್ ಕುಮಾರ್, ನಗರಸಭೆಯ ಸಮನ್ವಯಾಧಿಕಾರಿ ಪಿ.ಪಾಲಯ್ಯ, ಪರಿಸರ ಇಂಜಿನಿಯರ್ ನರೇಂದ್ರಬಾಬು, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕಂದಿಕೆರೆ ಸುರೇಶ್ಬಾಬು, ವಾರ್ತಾ ಇಲಾಖೆ ಸುನೀಲ್ ಮುಂತಾದವರು ಉಪಸ್ಥಿತರಿದ್ದರು.