ಹಿರಿಯೂರು:
ನಗರದ ರೋಟರಿ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಹಿರಿಯ ವಿಶ್ರಾಂತ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನಿತ ನಿವೃತ್ತ ಶಿಕ್ಷಕರಾದ ಶ್ರೀ ಜಗನ್ನಾಥಗುಪ್ತರವರು ಮಾತನಾಡಿ, ಇಂದು ಮಕ್ಕಳಲ್ಲಿ ಪ್ರಾಮಾಣಿಕತೆ ಮತ್ತು ದೇಶಾಭಿಮಾನವನ್ನು ಬೆಳಸಬೇಕಾದರೆ, ಶಿಕ್ಷಕರು ಆದರ್ಶರಾಗಿದ್ದರೆ ಮಾತ್ರ ವಿದ್ಯಾರ್ಥಿಗಳನ್ನು ತಿದ್ದಬಹುದು ಎಂದರು.
ಮತ್ತೊಬ್ಬ ಸನ್ಮಾನಿತ ಶಿಕ್ಷಕ ಶ್ರೀ ಜಿ.ಪಿ.ನಾರಾಯಣ್ ಮಾತನಾಡಿ ಇಂದು ನಾವು ನಿರ್ಮಿಸಬೇಕಾಗಿರುವುದು ಭವ್ಯ ಶಾಲಾ ಕಟ್ಟಡಗಳನ್ನಲ್ಲ, ಬದಲು ವಿದ್ಯಾರ್ಥಿಗಳ ಮನದಲ್ಲಿ ಉಜ್ವಲ ರಾಷ್ಟ್ರಪ್ರೇಮ ಕಟ್ಟಲು ಪ್ರತಿಯೊಬ್ಬ ಶಿಕ್ಷಕರು ಕಟಿಬದ್ಧರಾಗಿ ದುಡಿಯಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷರಾದ ಶ್ರೀ ಎಂ.ಎಸ್.ರಾಘವೇಂದ್ರರವರು ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ರಾಷ್ಟ್ರವನ್ನು ಪ್ರೀತಿಸುವ ಹಾಗೂ ಗುರು-ಹಿರಿಯರಿಗೆ ಗೌರವವನ್ನು ತೋರಿಸುವ ಸಂಸ್ಕಾರವನ್ನು ಬೆಳೆಸಲು ಆದರ್ಶ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ತಿಪ್ಪೇಸ್ವಾಮಿ, ಜೋಗಪ್ಪ, ಆನಂದಶ್ರೇಷ್ಠಿ, ಬಿ.ಕೆ.ನಾಗಣ್ಣ ಹಾಗೂ ಚಂದ್ರಹಾಸ್ ಇವರುಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರೋಟರಿ ಕಾರ್ಯದರ್ಶಿ ಹೆಚ್.ವೆಂಕಟೇಶ್, ಎಂ.ವಿ.ಹರ್ಷ, ಎ.ರಾಘವೇಂದ್ರ ಸೇರಿದಂತೆ ಅನೇಕ ರೋಟರಿ ಮಿತ್ರರು ಭಾಗವಹಿಸಿದ್ದರು.