ಬ್ಯಾಡಗಿ:
ಮಾನವ ಸಂಪನ್ಮೂಲವನ್ನು ಸದ್ಭಳಕೆ ಮಾಡಿಕೊಳ್ಳುವಲ್ಲಿ ಶೈಕ್ಷಣಿಕ ವ್ಯವಸ್ಥೆ ಯಶಸ್ವಿಯಾಗಿದ್ದು ಇದರಿಂದಲೇ ನಾಗರಿಕ ಸಂಸ್ಕøತಿ ಮುಂದುವರೆಯಲು ಸಹಕಾರಿಯಾಗಿದೆ ಎಂದರೇ ತಪ್ಪಾಗಲಾರದು, ಕುಟುಂಬ, ಸಮಾಜ ಸೇರಿದಂತೆ ದೇಶವು ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಭರವಸೆಗಳನ್ನಿಟ್ಟಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆಗಳ ಉದ್ಘಾಟಿಸಿ ಅವರು ಮಾತನಾಡಿದರು, ಶಿಕ್ಷಣ ಸಂಸ್ಥೆಗಳು ಜನರಿಗೆ ಶೈಕ್ಷಣಿಕ ಸ್ವಾತಂತ್ರ್ಯ ಕೊಡಿಸುವ ಮೂಲಕ ಸರ್ಕಾರಕ್ಕೆ ಅಪ್ರತ್ಯಕ್ಷವಾಗಿ ಸಹಕರಿಸುತ್ತಿವೆ, ವಿದ್ಯಾವಂತರ ಸಂಖ್ಯೆಯೇ ದೇಶದ ಅಭಿವೃದ್ಧಿ ಮಾನದಂಡವಾಗುತ್ತಿದೆ ಹೆಚ್ಚು ಶಿಕ್ಷಣವಂತರನ್ನು ಹೊಂದಿರುವ ಜಪಾನ್ ಸೇರಿದಂತೆ ಇನ್ನಿತರ ರಾಷ್ಟ್ರಗಳು ಇಂದು ವಿಶ್ವವನ್ನೇ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವಷ್ಟು ಬಲಶಾಲಿಯಾಗಿದ್ದು, ಇದಕ್ಕೆ ಪ್ರಮುಖ ಕಾರಣ ಅಲ್ಲಿನ ವಿದ್ಯಾವಂತರ ಪರಿಶ್ರಮವಾಗಿದೆ ಎಂದರು.
ಸರ್ಕಾರದಿಂದ ನಿರೀಕ್ಷೆಯನ್ನಿಟ್ಟುಕೊಳ್ಳಬೇಡಿ: ಸ್ವಾಭಿಮಾನಿ ವಿದ್ಯಾರ್ಥಿಗಳು ಸರ್ಕಾರದಿಂದಲೇ ಎಲ್ಲವನ್ನೂ ನಿರೀಕ್ಷೆಯನ್ನಿಟ್ಟುಕೊಳ್ಳಬಾರದು, ನಿಮ್ಮ ಶೈಕ್ಷಣಿಕ ಪ್ರಗತಿ ಹೇಗಿರಬೇಕೆಂದರೆ ಸರ್ಕಾರವೇ ನಿಮ್ಮ ಬೆನ್ನ ಹಿಂದೆ ಬೀಳುವಂತಹ ಸ್ಥಿತಿ ನಿರ್ಮಾಣವಾಗಬೇಕು, ಮುಂದಿನ ದಿನಗಳಲ್ಲಿ ದೇಶದ ಪರಿಸ್ಥಿತಿ ಇನ್ನಷ್ಟು ಕ್ಲಿಷ್ಟಕರವಾಗಿರಲಿದೆ, ಈ ಎಲ್ಲ ಕಾರಣಗಳಿಂದ ಬದುಕಿನ ಹತ್ತು ಹಲವು ಆಯಾಮಗಳನ್ನು ತೋರಿಸಿಕೊಡುವಷ್ಟು ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಪ್ರತಿಷ್ಟೆಗಾಗಿ ಪ್ರಮಾಣ ಪತ್ರ ಬೇಡ:ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಎಚ್.ಬಿ.ಲಿಂಗಯ್ಯ ಮಾತನಾಡಿ, ಯಾವುದೇ ಲಾಭವಿಲ್ಲದಿದ್ದರೂ ಕೋಟಿಗಟ್ಟಲೇ ಹಣವ್ಯಯಿಸಿ ವಿವಿಧ ಸೌಲಭ್ಯಗಳುಳ್ಳ ಶಾಲಾ ಕಾಲೇಜುಗಳನ್ನು ಸರ್ಕಾರ ಆರಂಭಿಸಿದೆ, ಇಲ್ಲಿ ವಿದ್ಯೆಯನ್ನು ಪಡೆದಂತಹ ವಿದ್ಯಾರ್ಥಿಗಳು ಕುಟುಂಬವನ್ನು ಮುನ್ನಡೆಸುವುದರ ಜೊತೆಗೆ ದೇಶಕ್ಕೆ ಒಳಿತನ್ನು ಬಯಸುವ ಗುರುತರ ಜವಾಬ್ದಾರಿಯನ್ನು ತೋರಬೇಕು ಎಂದ ಅವರು ಪ್ರತಿಷ್ಠೆಗಾಗಿ ಶೈಕ್ಷಣಿಕ ಪ್ರಮಾಣಪತ್ರ ಪಡೆಯುವುದನ್ನು ನಿಲ್ಲಿಸಬೇಕು ಎಂದರು. ಪ್ರಾಚಾರ್ಯ ಡಾ.ಎಸ್.ಎನ್.ಸುರೇಶ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಡಾ.ಎನ್.ಎನ್.ಅರಬಗೊಂಡ, ಚೇತನಕುಮಾರ, ಪ್ರೇಮ ಬಿನ್ನಾಳ, ಜೆ.ಸಿ.ಇಂಡಿಮಠ ಇನ್ನಿತರರು ಉಪಸ್ಥಿತರಿದ್ದರು.