ಹರಪನಹಳ್ಳಿ:
ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ರೂಢಿಸಿಕೊಂಡರೆ ಮುಂದಿನ ಭವಿಷ್ಯದಲ್ಲಿ ಉಜ್ವಲರಾಗಲು ಸಾಧ್ಯ ಎಂದು ತಾಲ್ಲೂಕಿನ ಹಲುವಾಗಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಿನ್ಸಿಪಾಲ್ ಕೆ.ಆರ್. ಶಿವಕುಮಾರ್ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಬೆಂಗಳೂರು ಇವರ ಸಹಯೋಗದೊಂದಿಗೆ ಹಲುವಾಗಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬ್ಯಾಗ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಮಯದ ಪ್ರಜ್ಞೆ ಇದ್ದರೆ ಯಶಸ್ಸು ಕಾಣಲು ಸಾಧ್ಯ. ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಉತ್ತಮ ಅಂಕಳಿಸಿದ್ದರೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಜೊತೆಗೆ ಹೆತ್ತವರಿಗೂ ಖರ್ಚಿನ ಹೊರೆ ಕಡಿಮೆಯಾಗುತ್ತದೆ. ಶಿಸ್ತು ಇಲ್ಲದ ಬದುಕು ಆರೋಗ್ಯ, ಆಯುಷ್ಯ, ಸಾಧನೆ ಎಲ್ಲವನ್ನೂ ಹಾಳು ಮಾಡುತ್ತದೆ. ಹಾಗಾಗಿ ಬಾಲ್ಯದ ಹಂತದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸಿನ ಹಾದಿ ಹಿಡಿಯಬೇಕು ಎಂದರು.
ಶಿಕ್ಷಕರಾದ ಗಿರೀಶ್ ಕೊಸಂಬಿ, ಹನುಮಂತ, ಯಾಸಿನ್ ಜಮೇದಾರ್, ಎಂ.ಮಲ್ಲಮ್ಮ, ಇಮ್ತಿಯಾಜ್ ಖಾನ್, ಕ್ಲರ್ಕ್ ರಮೇಶ್, ಸಹಾಯಕ ರಮೇಶ್ ಮತ್ತು ಪಾಲಕರು, ವಿದ್ಯಾರ್ಥಿಗಳು ಇದ್ದರು.