ರಿಷಬ್ ಶೆಟ್ಟಿ ನಿರ್ದೇಶನದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’. ಇದು ಮಕ್ಕಳು ತಮ್ಮ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ಹೋರಾಡುವ ಕಥಾ ಚಿತ್ರ. ನಮ್ಮ ಕನ್ನಡ ಭಾಷೆ ನಮಗೆ ಏಕೆ ಮುಖ್ಯ ಎಂದು ತಿಳಿಸುವ ಚಿತ್ರ ಇದಾಗಿದೆ. ಮಕ್ಕಳು ಮುಖ್ಯ ಪಾತ್ರಗಳಲ್ಲಿ ನಟಿಸುವ ಚಿತ್ರವಾದರೂ ಇದು ದೊಡ್ಡವರಿಗಾಗಿ ಮಾಡಿದ ಚಿತ್ರವಾಗಿದೆ.
ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕೊನೆಯಲ್ಲಿ ಧೋನಿ ತರಹ ಬಂದು ಸಿಕ್ಸರ್ ಬಾರಿಸಿ ಸಿನೆಮಾ ಗೆಲ್ಲಿಸುವುದು ಮಾತ್ರ ಅನಂತನಾಗ್. ಕಥೆ ಚೆನ್ನಾಗಿದ್ದು, ಸಂಭಾಷಣೆ ಕೂಡ ಚುರುಕಾಗಿದೆ. ಆದರೆ ಇಲ್ಲಿ ಕಾಸರಗೋಡಿನ ಭಾಷೆ ಇದ್ದುದರಿಂದ ಕೆಲವು ಕಡೆ ಕೆಲವು ಜನರಿಗೆ ಕೆಲವು ಶಬ್ದಗಳು ಅರ್ಥವಾಗುವುದು ಕಷ್ಟಕರವಾಗಿದೆ. ಹಲವು ಕಡೆ ಇಂಗ್ಲೀಷ್ ಬಳಸಲಾಗಿದೆ. ಆದರೆ ಸಬ್ ಟೈಟಲ್ ಇರುವುದರಿಂದ ತೊಂದರೆಯಾಗುವುದು ಕಡಿಮೆ ಎನ್ನಬಹುದು.
ನವಿರು ನಿರೂಪಣೆಯ ಸಿನೆಮಾ “ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು ಚಿತ್ರಕ್ಕೆ ಸಂಗೀತ ಒಳ್ಳೆಯ ಸಾಥ್ ನೀಡಿದೆ. “ಪ್ರವೀಣಾ ದಡ್ಡ ದಡ್ಡ” ಹಾಡು ಜನಪ್ರಿಯವಾಗಿರುವುದು ಮೆಚ್ಚವಂತದ್ದು, ಕ್ಯಾಮರಾಮನ್ ಕಾಸರಗೋಡಿನ ಸೊಗಡನ್ನು ತುಂಬಾ ಚೆನ್ನಾಗಿ ಸೆರೆಹಿಡಿದಿದ್ದಾರೆ. ಸರಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಈ ಸಂಧರ್ಭದಲ್ಲಿ ಈ ಚಿತ್ರ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ.
ಒಬ್ಬ ಅಧಿಕಾರಿ ಸರ್ಕಾರಿ ಶಾಲೆಗೆ ಬರುವ ಹಣವನ್ನು ದುರುಪಯೋಗ ಮಾಡಿಕೊಂಡು ಶಾಲೆಯು ಅವನತಿಯತ್ತ ಸಾಗಿದೆ ಎಂದು ಶಾಲೆಯನ್ನು ಮುಚ್ಚುವ ಪ್ರಯತ್ನದಲ್ಲಿದ್ದಾಗ ಶಾಲೆಯ ಮಕ್ಕಳು ಸೇರಿಕೊಂಡಿ ಅಧಿಕಾರಿ ಮನೆಯ ಮುಂದೆ ಪ್ರತಿಭಟನೆ ಮಾಡುವುದರ ಜೊತೆಗೆ ಸಾಮಾಜಿಕ ಹೋರಾಟಗಾರರ ಬೆಂಬಲ ಪಡೆಯಬೇಕು ಎಂದು ತಿಳಿದುಕೊಂದು ಮೈಸೂರಿಗೆ ಬರುತ್ತಾರೆ.
ಅಲ್ಲಿ ಸಾಮಾಜಿಕ ಹೋರಾಟಗಾರನ ಹೆಸರಿದ್ದಂತಹ ಅನಂತನಾಗ್ ಕಾಸರಗೋಡಿಗೆ ಬಂದು ಸಾಕ್ಷ್ಯಾಧರಗಳನ್ನು ಪಡೆದು ಅದನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಅಧಿಕಾರಿಯ ಒಳಗುಟ್ಟನ್ನು ಹೊರಹಾಕಿ ಸರ್ಕಾರಿ ಶಾಲೆಯನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದೇ ಈ ಚಿತ್ರದ ಕಥನಾಂಶ ಆಗಿದ್ದು, ಸರ್ಕಾರಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ