ತುರುವೇಕೆರೆ
ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಸೆ.14 ರ ಶುಕ್ರವಾರ ತಾಲ್ಲೂಕಿನ ಡಿ. 10 ತೂಬಿನಲ್ಲಿ ನೀರು ಹರಿಸುವಂತೆ ಸಾವಿರಾರು ರೈತರೊಂದಿಗೆ ಧರಣಿ ಹಾಗೂ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.
ತಾಲ್ಲೂಕಿನ ವೆಂಕಟಾಪುರ, ಸೋಮಲಾಪುರ, ಮುದ್ಲಾಪುರ ಹಾಗೂ ಸುತ್ತಮುತ್ತಲಿನ ರೈತರು ಮಂಗಳವಾರ ಹಮ್ಮಿಕೊಂಡಿದ್ದ ವೆಂಕಟಾಪುರ ಕೆರೆಗೆ ಗಂಗಾಪೂಜೆ ಭಾಗಿಣ ಅರ್ಪಣೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲಾಡಳಿತ ಸರ್ಕಾರದ ಕೈಗೊಂಬೆಯಾಗಿದ್ದು ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸಲು ತಾರತಮ್ಯ ನೀತಿ ಅನುಸರಿಸುತ್ತಿದೆ. ಸಚಿವರ ಹಾಗೂ ಕಾಂಗ್ರೆಸ್ ಶಾಸಕರ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಆ.1 ರಿಂದಲೇ ತಾಲ್ಲೂಕಿನ ನಾಲೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಸುಳ್ಳು ಭರವಸೆ ನೀಡಿ ಈಗ ಮತ್ತೊಂದು ತಿಂಗಳು ಮುಂದೆ ಹಾಕುವ ಮೂಲಕ ತಾಲ್ಲೂಕಿನ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪ ಮಾಡಿದರು.
ಈಗಾಗಲೇ ಮಳೆ ಇಲ್ಲದೆ ರೈತರು ಕಂಗೆಟ್ಟಿದ್ದು ಡಿ 10, 9, 8 ನಾಲೆಗಳಲ್ಲಿ ಇದೂವರೆವಿಗೂ ನೀರು ಹರಿಸಿಲ್ಲ. ಈ ನಾಲೆಗಳಲ್ಲಿ ನೀರು ಹರಿಸುವಂತೆ ಈ ಭಾಗದ ರೈತರು ನನ್ನ ಮೇಲೆ ಒತ್ತಡ ಏರುತ್ತಿದ್ದು ರೈತರ ಹಿತದೃಷ್ಟಿಯಿಂದ ಸಾವಿರಾರು ರೈತರೊಂದಿಗೆ ಇದೇ 17 ರ ಶುಕ್ರವಾರ ಡಿ.10 ತೂಬಿನ ಬಳಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ತಿಳಿಸಿದರು.
ಜೀವವಿರುವವರೆಗೂ ಬಿಎಸ್ವೈಜೊತೆ: ಜನರು ಆಶೀರ್ವಾದ ಮಾಡಿ ಗ್ರಾಮ ಪಂಚಾಯ್ತಿಯಿಂದ ಒಮ್ಮೆಲೆ ಶಾಸಕನನ್ನಾಗಿ ಮಾಡಿದ್ದೀರಾ. ಅದರ ಋಣ ನನ್ನ ಮೇಲಿದ್ದು ನಾನು ಯಾವುದೇ ಕಾರಣಕ್ಕೂ ಕ್ಷೇತ್ರದ ಜನತೆಗೆ ದ್ರೋಹ ಬಗೆಯಲಾರೆ. ಹಾಗೂ ನಾನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿಶ್ವಾಸಕ್ಕೆ ಪಾತ್ರನಾಗಿದ್ದು ಅವರೂ ಸಹಾ ನನ್ನ ಮೇಲೆ ಅಭಿಮಾನವಿಟ್ಟಿದ್ದು ಅವರ ನಂಬಿಕೆಗೆ ದ್ರೋಹ ಬಗೆದು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಯಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಗೆ ಹೋಗಿ ಸಿಎಂ ಭÉೀಟಿ ಮಾಡಿದ್ದಾರೆ ಎಂಬ ಅಪಪ್ರಚಾರಕ್ಕೆ ತೆರೆ ಎಳೆದರು.
ಈ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಸ್ಥರಿಂದ ಶಾಸಕರಿಗೆ ಮೈಸೂರು ಪೇಟಧರಿಸಿ, ಶಾಲು ಹೊದಿಸಿ, ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ದುಂಡಾರೇಣಕಪ್ಪ, ಮುಖಂಡರಾದ ಕಡೇಹಳ್ಳಿಸಿದ್ದೇಗೌಡ, ವಿ.ಟಿ.ವೆಂಕಟರಾಮಯ್ಯ, ವೀರೇಂದ್ರಪಾಟೀಲ್, ಪಿಎಸ್ಐ ಶೆಟ್ಟಳಪ್ಪ, ಯೋಗಾನಂದ್, ನಿಜಾನಂದ್, ಸಂಪತ್ಕುಮಾರ್, ಸಿದ್ದಲಿಂಗಪ್ಪ, ಶಂಕರಪ್ಪ, ದೇವರಾಜಮ್ಮ, ಪುಟ್ಟಣ್ಣ, ಚೇತನ್, ರಾಜಣ್ಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.