ಕೂಡ್ಲಿಗಿ:
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಣ ಬಲವೇ ನಮ್ಮ ಸೋಲಿಗೆ ಪ್ರಮುಖ ಕಾರಣ ಎಂದು ಮಾಜಿ ಶಾಸಕ ಎನ್.ಟಿ, ಬೊಮ್ಮಣ್ಣ ಹೇಳಿದರು. ಹಿರೇಮಠ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಜೆಡಿಎಸ್ ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ನಡೆದ ಎಲ್ಲಾ ಸಮೀಕ್ಷೆಗಳು ಗೆಲುವು ನಮ್ಮದೆ ಎಂದು ಹೇಳುತ್ತಿದ್ದವು. ಆದರೆ ಕೊನೆಯ ದಿನದಲ್ಲಿ ನಮ್ಮ ಎಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾದವು. ಆದರೆ ಈ ಸೋಲಿನಿಂದ ಯಾರು ಕೂಡ ನಿರಾಸೆಯಾಗಬೇಕಾಗಿಲ್ಲ. ಸೋತಿದ್ದೇವೆ ಎಂಬ ಮನೋಭವನೆಯನ್ನು ಬಿಟ್ಟು ಪಕ್ಷ ಸಂಘತನೆ ಮತ್ತು ಮುಂದಿನ ಚುನಾವಣೆಗಳ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಕಾರ್ಯಕರ್ತರಿಗೆ ಹೇಳಿದರು.
ನಮ್ಮ ಪಕ್ಷದ ಸರ್ಕಾರವೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ನಮ್ಮ ಕ್ಷೇತ್ರಕ್ಕೆ ಬೇಕಾಗುವ ಯೋಜನೆಗಳನ್ನು ಜಾರಿ ಮಾಡಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ತುಂಗಾಭದ್ರ ನದಿಯಿಂದ ವ್ಯಾರ್ಥವಾಗಿ ಹರಿದು ಹೋಗುವ ನೀರನ್ನು ತಾಲ್ಲೂಕಿನ ಕೆರೆ ಕಟ್ಟೆಗಳಿಗೆ ತುಂಬಿಸುವ ಯೋಜನೆ ಜಾರಿ ಮಾಡುವಂತೆ ಎಲ್ಲಾ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಬೇಟಿ ಮಾಡಿ ಒತ್ತಾಯ ಮಾಡೋಣ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗುಪ್ಪಾಲ್ ಕಾರಪ್ಪ ಮಾತನಾಡಿ, ಚುನಾವಣೆಯಲಿ ಸೋತ ವಿಷಯಕ್ಕೆ ನಾವು ಯಾರನ್ನು ದೂಷಣೆ ಮಾಡುವುದು ಬೇಡ. ನಮ್ಮ ಪಕ್ಷವನ್ನು ಬಲಪಡಿಸಿ ಮುಂಬರುವ ಚುನಾವಣೆಗಳಲ್ಲಿ ಗೆಲವು ಪಡೆಯುವುದರತ್ತ ಗಮನ ಹರಿಸೋಣ ಎಂದು ಹೇಳಿದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪಿ. ರಜನಿಕಾಂತ್ ಮಾತನಾಡಿ, ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎನ್ನುವ ಕಾರಣಕ್ಕೆ ನಾನು ಜೆಡಿಎಸ್ ಸೇರಿದೆ. ಈ ಸಂದರ್ಭದಲ್ಲಿ ನನಗೆ ಬಂದ ಅನೇಕ ಅಮೀಷಗಳನ್ನು ಬದಿಗಿಟ್ಟು ಎನ್.ಟಿ. ಬೊಮ್ಮಣ್ಣ ಅವರ ಗೆಲುವಿಗಾಗಿ ನಿರಂತರ ಕೆಲಸ ಮಾಡಿದೆವು. ಆದರೂ ಹಿರಿಯರಾದ ಎನ್.ಟಿ. ಬೊಮ್ಮಣ್ಣ ಅವರ ಸೋಲು ನೋವು ತಂದಿದೆ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಗೌರವಧ್ಯಕ್ಷ ಅಲಮಾಪುರ ಬಸವರಾಜ, ಮುಖಂಡರಾದ ಡಾ. ಎನ್.ಟಿ. ಶ್ರೀನಿವಾಸ, ಜರಿಮಲೆ ಶಶಿಧರ, ಘನಿಸಾಬ್, ಸಿದ್ದಪ್ಪ, ಜಯರಾಂ ನಾಯಕ, ಅಮ್ಮನಕೇರಿ ಕೊಟೇಶ್, ಗುಡೇಕೋಟೆ ರಾಜಣ್ಣ, ಕುಮಾರಸ್ವಾಮಿ, ರುದ್ರಪ್ಪ, ಚನ್ನಬಸಪ್ಪ, ಇಮಾಮ್ ಸಾಬ್, ಸಣ್ಣ ರಂಗಪ್ಪ, ಸೂಲದಹಳ್ಳಿ ಸಿದ್ದಪ್ಪ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಅನೇಕ ಕಾರ್ಯಕರ್ತರು ಚುನಾವಣೆಯ ಸೋಲು ಹಾಗೂ ಪಕ್ಷ ಸಂಘಟನೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ