ಹರಿಹರ:
ನಗರದ ಎಪಿಎಂಸಿ ಆವರಣದ ಹಮಾಲರ ವಸತಿ ಪ್ರದೇಶದಲ್ಲಿ ಶ್ರಮಿಕರ ಭವನ ಅಥವಾ ಮಿನಿ ಸಮುದಾಯ ನಿರ್ಮಿಸಬೇಕೆಂದು ಮಹಜೇನಹಳ್ಳಿ ಶ್ರೀ ಗ್ರಾಮದೇವತೆ ಹಮಾಲರ ಸಂಘದಿಂದ ಸೋಮವಾರ ಪೌರಾಯುಕ್ತೆ ಎಸ್.ಲಕ್ಷ್ಮಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಸಂಘದ ಗೌರವಾಧ್ಯಕ್ಷ ಹೆಚ್.ಕೊಟ್ರಪ್ಪ, ಸಂಘದ ಹೋರಾಟದ ಫಲವಾಗಿ ಹಮಾಲರ ವಸತಿಗೆ ಮಂಜೂರಾಗಿರುವ 2 ಎಕರೆ ಜಮೀನಿನಲ್ಲಿ 82 ನಿವೇಶನಗಳು ರಚನೆಯಾಗಿದ್ದು, ಉಳಿದ ಜಾಗದಲ್ಲಿ ಅಗತ್ಯ ನಾಗರೀಕ ಸೌಲಭ್ಯ ನಿರ್ಮಿಸಬೇಕಿದೆ ಎಂದರು.
ಹಮಾಲರು ಮೂಲತಃ ಶ್ರಮಜೀವಿಗಳು, ಹಮಾಲರಲ್ಲಿ ಎಲ್ಲಾ ಧರ್ಮ, ಜಾತಿಯ ಬಡ ಜನರಿದ್ದಾರೆ. ಆದ್ದರಿಂದ ಸದರಿ ವಸತಿ ಪ್ರದೆಶದಲ್ಲಿ ಶ್ರಮಿಕರ ಭವನ ಅಥವಾ ಮಿನಿ ಸಮುದಾಯ ಭವನ ನಿರ್ಮಾಣ ಮಾಡಿದರೆ ಮದುವೆ, ಮಂಗಳಕಾರ್ಯ ಮುಂತಾದವುಗಳನ್ನು ನೆರವೇರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಅಲ್ಲದೆ ಹಮಾಲರಿಗೂ ಪೂರ್ಣ ಪ್ರಮಾಣದ ನಾಗರೀಕ ಸೌಲಭ್ಯಗಳು ದೊರೆತಂತಾಗುತ್ತದೆ. ಈ ಬಗ್ಗೆ ಪೌರಾಯುಕ್ತರು ಗಮನ ಹರಿಸಿ ಕಷ್ಟಪಟ್ಟು ದುಡಿಯುವ ಹಮಾಲರ ಕ್ಷೇಮಾಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನಂತರ ತಾಲ್ಲೂಕು ಕಚೇರಿಗೂ ತೆರಳಿ ತಹಶೀಲ್ದಾರ್ ರೆಹನ್ ಪಾಷಾರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಹೆಚ್.ಬಿ.ರುದ್ರಗೌಡ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೊಸಮನಿ, ಬಸವರಾಜ, ಗೋವಿಂದಪ್ಪಪ, ನಾಗಪ್ಪ, ಶಿವಮೂರ್ತಪ್ಪ, ರೆಹಮಾನ್, ಹೆಚ್.ಪರಶುರಾಮಪ್ಪ, ಶಿರಾಂ, ಹುಸೇನ್, ಈರಪ್ಪರೆಡ್ಡಿ, ಉಬೇದುಲ್ಲಾ, ರೇವಣಪ್ಪ, ನಂಜಪ್ಪ, ಶಿವಪ್ಪ, ನಾಗಪ್ಪ, ಮಂಜುನಾಥ್, ಪಕ್ಕೀರಪ್ಪ, ಯಲ್ಲಮ್ಮ.ಕೆ, ಕರೀಂಲಾಲ್, ಮಹಬೂಬ್, ಮುತ್ತಣ್ಣ, ಶೌಖತ್ ಅಲಿ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ