ಹಿಪ್ಪಿತ್ತೇರಿ ಮಾಗಾಣಿಯ ಅಜ್ಜಯ್ಯನಿಗೆ ಆ.27ರಂದು ಮಹಾರುದ್ರಾಭಿಷೇಕ

ಬಳ್ಳಾರಿ:

      ಜಿಲ್ಲೆಯ ಹೊಸಪೇಟೆ ತಾಲೂಕಿನ ಹಿಪ್ಪಿತೇರಿ ಮಾಗಾಣಿಯಲ್ಲಿರುವ ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಸ್ವಾಮಿ ಗದ್ದುಗೆಗೆ 10 ನೇ ವಾರ್ಷಿಕ ಶ್ರಾವಣ ಮಾಸದ ಪ್ರಯುಕ್ತ ಮಹಾರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

      ಈ ಕುರಿತು ಶ್ರೀಮಠದ ಮಹಾಶಿವಶರಣೆ, ಮಾತಾ ಅನುರಾಧೇಶ್ವರಿ ಅವರು ಪತ್ರಿಕಾ ಪÀ್ರಕಟಣೆ ನೀಡಿದ್ದು, ಆ.26ರಂದು ಬೆಳಿಗ್ಗೆ 9 ಗಂಟೆಗೆ ಮಂಡಾಳರಾಶಿ ತರಲಾಗುತ್ತದೆ. ಚಿತ್ತವಾಡಿಗಿ ತಿರುಮಲ ನಗರದ ಮಲ್ಲಿಕಾರ್ಜುನಗೌಡರ ನಿವಾಸದಿಂದ ಸುಮಂಗಲಿಯರು ಎಸ್.ಎಂ.ಚಂದ್ರಯ್ಯ ಸ್ವಾಮಿಗಳ ನೇತೃತ್ವದಲ್ಲಿ ವೀರಗಾಸೆ ಮತ್ತು ಕಳಸದೊಂದಿಗೆ ಈ ಪ್ರಮಥ ಕಾರ್ಯಕ್ರಮ ನೆರವೇರಿಸಲಿದ್ದಾರೆ.

      ಸಂಜೆ 5 ಗಂಟೆಗೆ ನಡೆಯಲಿರುವ 4ನೇ ಶಿವಾನುಭವಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳದ ನಗರಗಡ್ಡಿ ಮಠದ ಪೂಜ್ಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಮೈನಳ್ಳಿ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಹಾಶಿವಶರಣೆ, ಮಾತಾ ಅನುರಾಧೇಶ್ವರಿ ವಹಿಸಲಿದ್ದಾರೆ. ಅಂಬಾಮಠದ ಸಂಗಮೇಶ ಶರಣರು ಪ್ರವಚನ ನೀಡಲಿದ್ದಾರೆ.

       ಅತಿಥಿಗಳಾಗಿ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಾಲಿ ಸಿದ್ಧಯ್ಯಸ್ವಾಮಿ, ಬಳ್ಳಾರಿಯ ಖ್ಯಾತ ವೈದ್ಯ ಡಾ.ಸೋಮೇಶ್ವರ ಗಡ್ಡಿ, ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಂ.ಮಹ್ಮದ್ ಇಮಾಮ್ ಇನ್ನಿತರರು ಆಗಮಿಸಲಿದ್ದಾರೆ. ಇದೇವೇಳೆ ಆಕಾಶವಾಣಿ ಕಲಾವಿದರೂ ಸೇರಿದಂತೆ ವಿವಿಧ ಸಂಗೀತ ಸಾಧಕರು, ನೃತ್ಯಪಟುಗಳು ಧಾರ್ಮಿಕ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ರಾತ್ರಿ 10 ಗಂಟೆಗೆ ಬಸವನದುರ್ಗ ಹಾಗೂ ಚಿತ್ತವಾಡಿಗಿಯ ಭಜನಾ ಮಂಡಳಿಗಳಿಂದ ಭಜನೆ ಜರುಗಲಿದೆ.

      ಆ.27ರಂದು ಪ್ರಾತಃಕಾಲ 4 ಗಂಟೆಗೆ ಹೊಸಪೇಟೆಯ ಬಸಯ್ಯ ಶಾಸ್ತ್ರಿಗಳಿಂದ ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಸ್ವಾಮಿ ಗದ್ದುಗೆಗೆ ಮಹಾ ರುದ್ರಾಭಿಷೇಕ ಜರುಗಲಿದೆ. ಬೆಳಿಗ್ಗೆ 6 ಗಂಟೆಗೆ ಗಂಗೆ ಪೂಜೆಗೆ ತೆರಳಿ ಹರಿಪುರದ ವೀರಭದ್ರೇಶ್ವರ ವೀರಗಾಸೆ, ನಂದಿಕೋಲು, ಸಮಾಳ ಮೇಳದೊಂದಿಗೆ ಗ್ರಾಮ ಸಂಚಾರ ಮಾಡಿ ಬಳಿಕ ಗದ್ದುಗೆ ಸಾನಿಧ್ಯದಲ್ಲಿ ಪುರವಂತರು, ಭಕ್ತವೃಂದದಿಂದ ಅಗ್ನಿ ಪ್ರವೇಶ, ಧ್ವಜದ ಸವಾಲು, ಮಹಾಮಂಗಳಾರತಿ ನಂತರ ಮಹಾಪ್ರಸಾದ ಜರುಗಲಿದೆ.

      ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಪಾಲ್ಗೊಂಡು ಅಜ್ಜಯ್ಯನ ಕೃಪೆಗೆ ಪಾತ್ರರಾಗುವಂತೆ *ಮಾತಾ ಅನುರಾಧೇಶ್ವರಿ* ಕೋರಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap