ಚಿತ್ರದುರ್ಗ:
ಚಿತ್ರದುರ್ಗದ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಬಸವಮೂರ್ತಿ ಮಾದಾರಚನ್ನಯ್ಯಸ್ವಾಮಿ ಹಾರೈಸಿದರು.
ಚಿತ್ರದುರ್ಗ ಕಬಡ್ಡಿ ಪ್ರೀಮಿಯರ್ ಲೀಗ್ ವತಿಯಿಂದ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಚಿತ್ರದುರ್ಗ ನಗರದಲ್ಲಿ ಪ್ರತಿ ವರ್ಷವೂ ಕ್ರೀಡಾ ಹಬ್ಬ ನಡೆಯಬೇಕೆಂಬುದು ನಮ್ಮ ಆಸೆ. ಅದಕ್ಕಾಗಿ ಜನ ತನು, ಮನ, ಧನವನ್ನು ಅರ್ಪಿಸುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತ ಬರುತ್ತಿದ್ದಾರೆ. ಈ ಹಿಂದೆ ಚಿತ್ರದುರ್ಗದಲ್ಲಿ ಪ್ರಖ್ಯಾತ ಕ್ರೀಡಾ ತಂಡಗಳಿದ್ದವು. ಅಂತಹ ತಂಡಗಳನ್ನು ಸೃಷ್ಟಿಸಿ ಗ್ರಾಮೀಣ ಪ್ರತಿಭೆಗಳನ್ನು ಹೊರತರಬೇಕಾಗಿದೆ. ಕ್ರೀಡೆ ಮತ್ತು ಸಾಂಸ್ಕøತಿಕವಾಗಿ ಯಾವ ಪ್ರದೇಶ ಮುಂದುವರೆಯುತ್ತದೊ ಅಂತಹ ಊರು ವಾಣಿಜ್ಯ ಮತ್ತು ಆರ್ಥಿಕವಾಗಿ ಶಕ್ತಿಶಾಲಿಯಾಗಲಿದೆ ಎಂದು ಹೇಳಿದರು.
ಚಿತ್ರದುರ್ಗ ಆರ್ಥಿಕವಾಗಿ ಹಿಂದುಳಿದಿರಬಹುದು ಆದರೆ ಕ್ರೀಡೆ ಮತ್ತು ಸಾಂಸ್ಕøತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಗೆದ್ದವರು ಇನ್ನು ಮೇಲ್ಮಟ್ಟಕ್ಕೆ ಹೋಗಿ ಸೋತವರು ಮುಂದೆ ಗೆಲ್ಲುವ ಪ್ರಯತ್ನ ಮಾಡಿ ಎಂದು ಕಬಡ್ಡಿ ಪಟುಗಳಿಗೆ ತಿಳಿಸಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮಾತನಾಡುತ್ತ ಭಾರತ ಕ್ರೀಡೆಯಲ್ಲಿ ಯಾವ ದೇಶಕ್ಕೂ ಕಮ್ಮಿಯಿಲ್ಲ. ಚಿತ್ರದುರ್ಗದ ಕಬಡ್ಡಿಪಟುಗಳು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಿ ಚಿತ್ರದುರ್ಗದ ಕೀರ್ತಿಯನ್ನು ಬೆಳಗಿಸಲು ಚಿತ್ರದುರ್ಗ ಕಬಡ್ಡಿ ಪ್ರೀಮಿಯರ್ ಲೀಗ್ನವರು ಪ್ರತಿ ವರ್ಷವೂ ಪುರುಷರ ಹೊನಲು ಬೆಳಕಿನ ಪಂದ್ಯವನ್ನು ಆಯೋಜಿಸುವ ಮೂಲಕ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಇದರ ಪ್ರಯೋಜನ ಪಡೆದುಕೊಂಡು ನಿಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಚಿತ್ರದುರ್ಗ ಹಿಂದಿನಿಂದಲೂ ಕ್ರೀಡೆಯಲ್ಲಿ ಹೆಸರು ಮಾಡಿರುವ ನೆಲ. ಸೋಲು-ಗೆಲುವಿಗಿಂತಲೂ ಕ್ರೀಡೆಯಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಿ ಎಂದು ಕಬಡ್ಡಿ ಪಟುಗಳಿಗೆ ತಿಳಿಸಿದರು.
ಸಿ.ಕೆ.ಪಿ.ಎಲ್.ಅಧ್ಯಕ್ಷ ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ನಿವೃತ್ತ ಸಬ್ಇನ್ಸ್ಪೆಕ್ಟರ್ ಸಮೀವುಲ್ಲಾ, ಕೆ.ಟಿ.ಶಿವಕುಮಾರ್, ಎನ್.ಡಿ.ಕುಮಾರ್, ನ್ಯಾಯವಾದಿ ಕುಮಾರ್ಗೌಡ, ವಾಣಿಜ್ಯೋದ್ಯಮಿ ಎಂ.ಕೆ.ತಾಜ್ಪೀರ್, ನಗರಸಭೆ ಸದಸ್ಯ ಎನ್.ಚಂದ್ರಶೇಖರ್, ಧರಣಿ ಮೋಟಾರ್ಸ್ನ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಹೆಚ್.ಅಂಜಿನಪ್ಪ, ರಾಜು, ಕಬಡ್ಡಿ ಆಯೋಜಕರುಗಳಾದ ಮುರುಗೇಶ್, ನಾಗಭೂಷಣ್ ವೇದಿಕೆಯಲ್ಲಿದ್ದರು.