ಚೆನ್ನೈ:
ತಮಿಳಿನ ಪಾಕ್ಷಿಕ ಪತ್ರಿಕೆ ‘ನಕ್ಕೀರನ್’ ಸಂಪಾದಕ, ತಮಿಳುನಾಡಿನ ಹಿರಿಯ ಪತ್ರಕರ್ತ ನಕ್ಕೀರನ್ ಗೋಪಾಲ್ ಅವರನ್ನು ಮಂಗಳವಾರ ಬೆಳಗ್ಗೆ ಚೆನ್ನೈ ನಗರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ರಾಜ್ಯಪಾಲ ಭನ್ವಾರಿಲಾಲ್ ಪುರೋಹಿತ್ ಕುರಿತು ಮಾನಹಾನಿಕರ ಲೇಖನ ಬರೆದ ಆರೋಪದ ಮೇಲೆ ಅವರ ಕಚೇರಿ ನೀಡಿದ ದೂರಿನ ಆಧಾರದಲ್ಲಿ ಮಂಗಳವಾರ ಬೆಳಗ್ಗೆ 8:15ರ ಸುಮಾರಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಪುಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗೋಪಾಲ್ ತೆರಳುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧನ ಹಿನ್ನೆಲೆ:
ಇತ್ತೀಚೆಗೆ ಬೆಳಕಿಗೆ ಬಂದ ವಿಶ್ವವಿದ್ಯಾಲಯದ ಲೈಂಗಿಕ ಹಗರಣದಲ್ಲಿ ರಾಜ್ಯಪಾಲ ಪುರೋಹಿತ್ ಹಾಗೂ ಅವರ ಕಚೇರಿಯ ಉನ್ನತಾಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ನಕ್ಕೀರನ್ ಪತ್ರಿಕೆಯಲ್ಲಿ ವರದಿಯಾಗಿತ್ತು ಎಂದು ಹೇಳಿರುವ ಪೊಲೀಸ್ ಅಧಿಕಾರಿಯೊಬ್ಬರು, ರಾಜಭವನ ಗೋಪಾಲ್ ವಿರುದ್ಧ ಯಾವ ರೀತಿಯ ದೂರು ನೀಡಿದೆ ಎಂದು ಬಹಿರಂಗಪಡಿಸಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ