ಮಂಡ್ಯದಿಂದ ಲೋಕಸಭೆಗೆ ಸುಮಲತಾ ಸ್ಪರ್ಧೆ!?

ಬೆಂಗಳೂರು:

  ಜ.12 ರಂದು ಮಂಡ್ಯದಲ್ಲಿ ನಡೆದ ಅಂಬರೀಶ್ ನುಡಿನಮನ ಕಾರ್ಯಕ್ರಮದ ಬಳಿಕ ಪ್ರತ್ಯೇಕ ಮಾತುಕತೆ ನಡೆಸಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟರಾದ ದರ್ಶನ್, ಶಿವರಾಜ್ ಕುಮಾರ್, ಯಶ್, ದೊಡ್ಡಣ್ಣ ಸೇರಿದಂತೆ ಬಹುತೇಕ ಪ್ರಮುಖರು ಚುನಾವಣಾ ರಾಜಕಾರಣಕ್ಕೆ ಇಳಿಯುವಂತೆ ಒತ್ತಡ ಹೇರಿದ್ದರು.

  “ಯಾವುದಾದರೂ ಪಕ್ಷದಿಂದ ಸ್ಪರ್ಧಿಸಿ, ಯಾವುದೇ ಪಕ್ಷ ಬೇಡ ಎನ್ನುವುದಾದರೆ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಚುನಾವಣೆ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ “ಎಂದು ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಮತ್ತಿತರರು ಸುಮಲತಾ ಅವರಿಗೆ ತಿಳಿಸಿದ್ದರು.

  ಚಿತ್ರರಂಗದ ಗಣ್ಯರ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದ ಸಮ್ಮತಿ ಸೂಚಿಸಿದ್ದು, ಈ ಬಗ್ಗೆ ಕಾಲ ಬಂದಾಗ ಸೂಕ್ತ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಮಾಜಿ ಸಚಿವ ಎ.ಮಂಜು ಮನೆಯಲ್ಲಿ 15 ಕ್ಕೂ ಹೆಚ್ಚು ಮಾಜಿ ಶಾಸಕರು ಒಂದಾಗಿ ಮಂಡ್ಯ ಕ್ಷೇತ್ರದಿಂದ ಅಂಬರೀಶ್ ಪುತ್ರ ಅಭಿಷೇಕ್ ಅವರನ್ನು ಕಣಕ್ಕಿಳಿಸಬೇಕೆಂದು ಒಮ್ಮತದ ನಿರ್ಣಯ ಕೈಗೊಂಡಿದ್ದರು. ವಿಚಿತ್ರವೆಂದರೆ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವಂತೆ ಕಾರ್ಯಕರ್ತರು, ಮುಖಂಡರು ಒತ್ತಡ ಹೇರಿದ್ದಾರೆಂಬ ಮಾಹಿತಿ ಇದೆ. ಇತ್ತೀಚೆಗೆ ಮಂಡ್ಯಕ್ಕೆ ಭೇಟಿ ನೀಡಿದ ನಿಖಿಲ್ ರಾಷ್ಟ್ರೀಯ ಅಧ್ಯಕ್ಷರು ಸಮ್ಮತಿಸಿದರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದ ಎಂಬ ಸಂದೇಶ ರವಾನಿಸಿದ್ದರು.

  ಈ ನಡುವೆ ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿರುವ ಮಾಜಿ ಪ್ರಧಾನಿ ದೇವೆಗೌಡರು ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಸೂಕ್ತ ಮತ್ತು ಸುರಕ್ಷಿತ ಕ್ಷೇತ್ರದತ್ತ ದೇವೇಗೌಡರ ಕಣ್ಣು ನೆಟ್ಟಿದೆ. ಒಂದೆಡೆ ಮಂಡ್ಯದಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಕಣಕ್ಕಿಳಿಸಲು ಪಕ್ಷದ ಪ್ರಮುಖ ಮುಖಂಡರು ಉತ್ಸುಕರಾಗಿದ್ದರೆ, ಕಾಂಗ್ರೆಸ್ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  ಹೀಗಾಗಿ ಮಂಡ್ಯ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್ ಸಂಸದ ಎಲ್.ಆರ್.ಶಿವರಾಮೆಗೌಡ ಮುಂದೇನು ಎಂದು ತಿಳಿಯದೆ ಗೊಂದಲಕ್ಕೆ ಸಿಲುಕಿದ್ದಾರೆ. ಪಕ್ಷದ ವರಿಷ್ಠರು ರಾಜ್ಯ ಸಭೆಗೆ ಶಿವರಾಮೆಗೌಡರನ್ನು ಕಳುಹಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆ ಮೂಲಕ ದೇವೇಗೌಡರು ಅಥವಾ ಅವರ ಮೊಮ್ಮಗ ನಿಖಿಲ್ ಮಂಡ್ಯದಿಂದ ಕಣಕ್ಕಿಳಿಯಲು ತಂತ್ರಗಾರಿಕೆ ಸಿದ್ದವಾಗಿದೆ. ಆದರೆ ಕಾಂಗ್ರೆಸ್ಸಿನ ಮಾಜಿ ಸಚಿವರು, ಶಾಸಕರು ಶತಾಯ ಗತಾಯ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಸಿದ್ದರಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

 ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ತಿಕ್ಕಾಟದಲ್ಲಿ ಮಂಡ್ಯ ಜಿಲ್ಲೆ ರಾಜಕಾರಣದಲ್ಲಿ ಚುನಾವಣೆಗೆ ಇನ್ನು 6 ತಿಂಗಳಿರುವಾಗಲೇ ಭರ್ಜರಿ   ಕಾವೇರಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಯಾರೆ ಸ್ಪರ್ಧಿಸಿದರೂ ಗೆಲುವು ಖಚಿತ ಎನ್ನುವುದನ್ನು ಅರಿತಿರುವ ನಾಯಕರು ತಮ್ಮವರನ್ನು ಲೋಕಸಭೆಗೆ ಕಳುಹಿಸಲು ಇನ್ನಿಲ್ಲದ ತಂತ್ರಗಾರಿಕೆಗೆ ಮೊರೆಹೋಗಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap