ಬೆಂಗಳೂರು:
ಜಮೀನಿಗೆ ನುಗ್ಗಿದ್ದ ಆನೆಗಳ ಹಿಂಡನ್ನು ಓಡಿಸಲು ಗ್ರಾಮಸ್ಥರು ಪ್ರಯತ್ನಿಸುವಾಗ ಆನೆಯೊಂದು ಯುವಕನೊಬ್ಬನನ್ನು ತುಳಿದು ಗಾಯಗೊಳಿಸಿದ ಘಟನೆ ಆನೇಕಲ್ ಗಡಿ ಭಾಗದ ತಮಿಳುನಾಡಿನ ಬಿರ್ಜೆಪಲ್ಲಿಯಲ್ಲಿ ನಡೆದಿದೆ.
ಬಿರ್ಜೆಪಲ್ಲಿಯ ಜಮೀನಿನಲ್ಲಿ ಶನಿವಾರ ರಾತ್ರಿ ಆನೆಗಳ ಹಿಂಡು ಕಾಣಿಸಿಕೊಂಡು ಬೆಳೆಯನ್ನು ನಾಶ ಮಾಡುತ್ತಿದ್ದವು ಆನೆಗಳನ್ನು ಕಂಡ ಗ್ರಾಮಸ್ಥರು ಹಾಗು ಅರಣ್ಯ ಸಿಬ್ಬಂದಿ ಓಡಿಸುವ ವೇಳೆ ಗ್ರಾಮಸ್ಥರ ಮೇಲೆಯೇ ಆನೆಗಳು ತಿರುಗಿ ಬಿದ್ದು ಯುವಕನೊಬ್ಬನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಆತ ಗಾಯಗೊಂಡಿದ್ದಾನೆ.
ಈ ಕಾಡಾನೆಗಳ ಅಟ್ಟಹಾಸಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಏಕಾಏಕಿ ಯುವಕನ ಮೇಲೆ ದಾಳಿ ಮಾಡಿದ ಆನೆ, ತನ್ನ ಕಾಲುಗಳಿಂದ ಯುವಕನನ್ನು ತುಳಿಯಲು ಯತ್ನಿಸಿದೆ. ಹಾಗೆಯೇ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದ ಯುವಕನ ಮೇಲೆ ತನ್ನ ಸೊಂಡಿಲಿನಿಂದ ದಾಳಿ ಮಾಡಿದೆ.ಆದರೆ ಅದೃಷ್ಟವಶಾತ್ ಕುದಲೆಳೆಯ ಅಂತರದಲ್ಲಿ ಯುವಕ ಪಾರಾಗಿ ಜೀವ ಉಳಿಸಿಕೊಂಡಿದ್ದಾನೆ.
ಗಡಿ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಆನೆಗಳ ಅಟ್ಟಹಾಸಕ್ಕೆ ಬೇಸತ್ತು ಹೋಗಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.ಈ ವಿಚಾರವಾಗಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.
ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕೆಲ ಕಾಲ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಇವೆಲ್ಲ ಘಟನೆಗಳ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಆನೆಗಳನ್ನು ಕಾಡಿಗೆ ಅಟ್ಟಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ