ಹೊಳಲ್ಕೆರೆ:
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಾಪಂನಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 13 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ ನರೇಗಾ ಯೋಜನೆಯ ಸಿಬ್ಬಂದಿಗಳು ಶನಿವಾರ ದಿಡೀರ್ ಪ್ರತಿಭಟನೆ ನಡೆಸಿ ತಾಪಂ ಇಒ ಮಹಾಂತೇಶ್ ಅವರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಾಂತ್ರಿಕ ಸಹಾಯಕರು, ತಾಂತ್ರಿಕ ಸಂಯೋಜಕರು, ಎಂ.ಐ.ಎಸ್ ಸಂಯೋಜಕರು, ಐಇಸಿ ಸಂಯೋಜಕರು ಹಾಗೂ ಕಂಪ್ಯೂಟರ್ ಆಪರೇಟರ್ಗಳು ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 13 ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಠವಾಗಿದೆ ಹಾಗಾಗಿ ಕೂಡಲೇ ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸರಕಾರ ಹಾಗೂ ಇಲಾಖೆ ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಾಕಷ್ಟು ಕೆಲಸಗಳನ್ನು ನೀಡುತ್ತಿದೆ. ಎಷ್ಟೇ ಒತ್ತಡಗಳಿದ್ದರು ಕೂಡ ಅಭಿವೃದ್ದಿಯ ದೃಷ್ಟಿಯಿಂದ ಹಗಲು ರಾತ್ರಿ ಎನ್ನದೆ, ಕಾಡು, ಮೇಡು ಎನ್ನದೆ ತಿರುಗಾಡಿಕೊಂಡು ಕೆಲಸದ ಕಡೆ ಹೆಚ್ಚು ಗಮನ ಹರಿಸುತಿದ್ದೇವೆ. ಯಾವುದೇ ಕೆಲಸಗಳನ್ನು ಬಾಕಿ ಇರಿಸಿಕೊಳ್ಳದೆ ಪೂರ್ಣಗೊಳಿಸುತಿದ್ದೇವೆ. ಹೀಗಿದ್ದು ಗುತ್ತಿಗೆದಾರರು ವೇತನ ನೀಡದಿರುವುದು ತರವಲ್ಲ. ನಮ್ಮ ಸಮಸ್ಯೆಗಳನ್ನು ಆಲಿಕೊಳ್ಳಬೇಕು. ಬಾಕಿ ಇರುವ 13 ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ತಾಂತ್ರಿಕ ಸಂಯೋಜಕ ಎಸ್.ಪ್ರತಾಪ್, ತಾಲೂಕು ಕೋ ಆರ್ಡಿನೇಟರ್ ಉಮಾಶಂಕರ್, ತಾಲೂಕು ಎಂಐಎಸ್ ಸಂಯೋಜಕ ಉಮೇಶ್, ತಾಂತ್ರಿಕ ಸಹಾಯಕರಾದ ಬಿ.ಎಸ್.ಅರ್ಜುನ್, ಎನ್.ದಯಾನಂದ್, ದೇವಿಪ್ರಸಾದ್, ಆರ್.ಧನುಷ್, ಗುರುಬಸವರಾಜ್, ಬಿ.ರಘುರಾಜ್, ಆರ್.ಅಭಿಜಿತ್, ತಿಪ್ಪೇಸ್ವಾಮಿ, ಶಶಿಧರ್, ನಾಗರಾಜ್, ಪೂಜಾ, ಕಾವ್ಯಶ್ರೀ, ತೇಜಸ್ವಿನಿ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ