ಶಿರಾ
ಸುಪ್ರಿಂಕೋರ್ಟಿನ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ತರಾತುರಿಯಲ್ಲಿ ರಾಜ್ಯ ಸರ್ಕಾರವು 3500 ಕ್ಕೂ ಹೆಚ್ಚು ಪ.ಜಾತಿ, ಪ.ವರ್ಗದ ಅಧಿಕಾರಿ-ನೌಕರರು ಹಿಂಬಡ್ತಿ ಪಡೆಯುವಂತಾಗಿದೆ. ರಾಜ್ಯ ಸರ್ಕಾರವು ತಾನು ರೂಪಿಸಿ ರಾಷ್ಟ್ರಪತಿಗಳಿಂದ ಅನುಮೋದನೆ ಪಡೆದ ಮುಂಬಡ್ತಿ ಕಾಯಿದೆಯನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ಪ.ಜಾತಿ ಮತ್ತು ಪ.ಪಂಗಡಗಳ ನೌಕರರು, ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಶಾಸಕರ ಮೂಲಕ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರದ ಈ ದೋರಣೆಯಿಂದಾಗಿ ಹಿಂಬಡ್ತಿ ಪಡೆದ ಅನೇಕ ನೌಕರರು-ಅಧಿಕಾರಿಗಳು ಅತಂತ್ರದ ಸ್ಥಿತಿಯಲ್ಲಿದ್ದಾರೆ. ಹಿಂಬಡ್ತಿ ಪಡೆದ ಕೆಲವರು ಆತ್ಮಹತ್ಯೆಗೂ ಯತ್ನಿಸಿದ್ದು, ಹಲವರು ಅಪಮಾನ ಸಹಿಸಲಾಗದೆ ನೊಂದು ಬೇಯುವಂತಾಗಿದೆ. ಸಮರ್ಥವಾಗಿ ಈ ವರ್ಗಗಳ ಪರ ಸುಪ್ರಿಂಕೋರ್ಟ್ನಲ್ಲಿ ವಾದ
ಮಂಡಿಸಿದ್ದರೆ ನಮಗೆ ಈ ಅನ್ಯಾಯವಾಗುತ್ತಿರಲಿಲ್ಲ. ಹಲವು ವರ್ಷಗಳಿಂದ ಈ ವರ್ಗಗಳಿಗೆ ಸಲ್ಲಬೇಕಾದ ಹುದ್ದೆಗಳು ಕೂಡ ಖಾಲಿ ಇವೆ. ಈಗ ತಂದಿರುವ ಮುಂಬಡ್ತಿ ನಿಜವಾದ ಹಕ್ಕು ಕೊಡುವ ಕಾಯಿದೆಯೂ
ಅಲ್ಲ. ಈ ಕೂಡಲೇ ಹಿಂಬಡ್ತಿಯಾದವರಿಗೆ ನ್ಯಾಯ ದೊರಕಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಶಿರಾ ಶಾಸಕ ಬಿ.ಸತ್ಯನಾರಾಯಣ್ ಅವರಿಗೆ ಮನವಿ ಸಲ್ಲಿಸಲಾಯಿತು.
ಶಾಸಕ ಬಿ.ಸತ್ಯನಾರಾಯಣ್ ಮಾತನಾಡಿ, ಪ.ಜಾತಿ, ಪ.ಪಂಗಡಗಳ ಬಗ್ಗೆ ಸರ್ಕಾರಕ್ಕೂ ಗೌರವವಿದೆ. ನಿಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಶ್ರಮಿಸಲಾಗುವುದು ಎಂದರು. ಹೆಚ್.ಎನ್.ಮಹದೇವಪ್ಪ, ದಲಿತ ಮುಖಂಡರಾದ ಜೆ.ಎನ್.ರಾಜಸಿಂಹ, ಲಕ್ಷ್ಮಣ, ಜಯಣ್ಣ, ಲೋಕೇಶ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ