ತುಮಕೂರು :
ಮಹಾನಗರ ಪಾಲಿಕೆಯ 3ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಐ.ಡಿ.ಎಸ್.ಎಮ್.ಟಿ ಲೇ ಔಟ್ 1985ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಮದ 150ಎಕರೆ ಭೂ ಸ್ವಾಧಿನ ಪಡಿಸಿಕೊಂಡು ಗೃಹ ಮಂಡಳಿಗೆ ಮತ್ತು ಇನ್ನಿತರೆ ಭೂ ಸ್ವಾಧೀನದ ಡಿ ನೋಟಿಫೈ ನಂತರ 108 ಎಕರೆಯಲ್ಲಿ ಐ.ಡಿ.ಎಸ್.ಎಮ್.ಟಿ ಲೇ ಔಟ್ ನಿರ್ಮಾನಗೊಂಡಿರುತ್ತದೆ.
ಇದರಲ್ಲಿ ಸರ್ವೇ ನಂ 197/2ರಲ್ಲಿ 9 ಎಕರೆ 28 ಗುಂಟೆಯು ಕೆ ಭೀಮಯ್ಯ ಬಿನ್ ಸಂಜೀವಯ್ಯ , ಸಿದ್ದಮ್ಮ ಕೋಂ ಸಿದ್ದಪ್ಪ, ಹೆಚ್ ಹನುಮಂತಯ್ಯ ಕೋಂ ಸಿದ್ದಲಿಂಗಯ್ಯ, ಹನುಮಂತಯ್ಯ ಮತ್ತು ದೊಡ್ಡಸಿದ್ದಯ್ಯ ಕೋಂ ಚಿಕ್ಕಹನುಮಂತಯ್ಯ ರವರಿಗೆ ಸಂಬಂಧಿಸಿದ್ದಾಗಿದ್ದು, 1986-87ರಲ್ಲಿ ಭೂ ಸ್ವಾಧೀನವಾಗಿರುತ್ತೆ. ಇದರ ಪರಿಹಾರದ ಮೊತ್ತ ಮತ್ತು ಭೂ ಸ್ವಾಧೀನವಾದ ಕುಟುಂಬಗಳಿಗೆ 30*40 ನಿವೇಶನಗಳ ಹಂಚಿಕೆಯಲ್ಲಿ ಐ.ಡಿ.ಎಸ್.ಎಮ್.ಟಿ ಲೇ ಔಟ್ನಲ್ಲಿ ನೀಡಿರುತ್ತಾರೆ.
ಸರ್ಕಾರ ಈ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳುವ ಮೊದಲಿನಿಂದಲೂ ಯಾವುದೇ ವಸತಿಯಲ್ಲದ ಮೊಹಮ್ಮದ್ ಹಯಾತ್ ಬಿನ್ ಲೇ ಹಮೀದ್ ಸಾಬ್, ರಮೇಶ್ ಕೋಂ ಲೇಟ್ ಸಿದ್ದಲಿಂಗಯ್ಯ, ಮಂಜಮ್ಮ ಕೋಂ ಮಂಜಪ್ಪ, ಕುಟುಂಬಗಳು ವಾಸಮಾಡಿಕೊಂಡು ಬಂದಿರುತ್ತಾರೆ. ಈ ಕುಟುಂಬಗಳಿಗೆ ಅಕ್ರಮ ಸಕ್ರಮ ಯೋಜನೆಯಲ್ಲಿ ಹಕ್ಕು ಪತ್ರ ನೀಡಲು ದಿನಾಂಕ-22-01-2018ರ ಆಶ್ರಯ ಸಮಿತಿ ಸಭೆಯಲ್ಲಿ ತಿರ್ಮಾನವಾಗಿರುತ್ತದೆ. ಈ ಭೂಮಿ ಸರ್ಕಾರಿ ಭೂಮಿ ಆಗಿದ್ದು ಸುಮಾರು 8 ಗುಂಟೆಯಷ್ಟು ಖಾಲಿ ನಿವೇಶನವನ್ನು ಕಬಳಿಸಲು ಹಿಂದಿನ ನಗರ ಪಾಲಿಕೆ ಮಾಜಿ ಕಾರ್ಪೋರೇಟರ್ ಮತ್ತು ಭೂ ಸ್ವಾಧೀನದ ನಂತರ ಪರಿಹಾರದ ಮೊತ್ತ ಮತ್ತು ನಿವೇಶನ ಪಡೆದ ಕುಟುಂಬಗಳು ಕಬಳಿಸಲು ಪ್ರಯತ್ನ ಪಡುತ್ತಿದ್ದರು.
ಇದರ ರಕ್ಷಣೆಗೆ ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕೆಂದು ತುಮಕೂರು ಮಹಾ ನಗರ ಪಾಲಿಕೆಯ ಆಯುಕ್ತರಿಗೆ ದಿನಾಂಕ-8-8-2018ರಂದು ಮನವಿಯನ್ನು ನೀಡಲಾಗಿತ್ತು.ಆದರೆ ಪಾಲಿಕೆ ಇದನ್ನು ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ಅಂದಾಜು 80 ಲಕ್ಷ ಬೆಲೆ ಬಾಳುವ ಭೂಮಿಯನ್ನು ಪ್ರಭಾವಿಗಳು ಕಬಳಿಸಲು ಗೂಂಡಾ ಪಡೆಗಳೊಂದಿಗೆ ದಿನಾಂಕ-08-01-2019ರಂದು ಮಧ್ಯಾಹ್ನ 12-10ಕ್ಕೆ ಮೊಹಮ್ಮದ್ ಹಯಾತ್ ಬಿನ್ ಲೇ ಹಮೀದ್ ಸಾಬ್ರವರ ಮನೆಗೆ ಏಕಾಏಕಿ ನುಗ್ಗಿ, ನಮ್ಮನ್ನು ಹೊರಗಡೆ ತಳ್ಳಿ, ಹೊಡೆದು ಮನೆಯ ಸಾಮಾನುಗಳ ಮೇಲೆ ಜೆಸಿಬಿಯಿಂದ ನಜ್ಜುಗುಜ್ಜು ಮಾಡಿ, ದಾಖಲೆಗಳು, ಬಟ್ಟೆ ದವಸ ಧಾನ್ಯಗಳಿಗೆ ಬೆಂಕಿಯಿಟ್ಟಿರುತ್ತಾರೆ.
ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಹಿರಿಯ ನಾಗರೀಕರಾದ ಮತ್ತು ಅಸಹಾಯಕರಾದ ಬಡವರ ಮೇಲೆ ನಡೆದ ಈ ದೌರ್ಜನ್ಯದ ಬಗ್ಗೆ ಗಮನ ಹರಿಸಿ ನೊಂದ ಕುಟುಂಬಗಳಿಗೆ ಪೋಲಿಸ್ ಇಲಾಖೆ ರಕ್ಷಣೆ ನೀಡಿ ಮಹಾನಗರ ಪಾಲಿಕೆ ಭೂಮಿಯನ್ನು ರಕ್ಷಿಸಲು ಮುಂದಾಗಬೇಕೆಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಆಗ್ರಹಿಸುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ