ಹುಳಿಯಾರು:
ಹಿಂದೂ ಧರ್ಮಕ್ಕೆ ರಾಜ ಸಿಂಹಾಸನ ದೊರಕಿಸಿಕೊಟ್ಟ ಛತ್ರಪತಿ ಶಿವಾಜಿ ಜಯಂತಿಯನ್ನು ಸರ್ಕಾರ ಆಚರಿಸಬೇಕು. ಈ ಮೂಲಕ ಶಾಲಾ, ಕಾಲೇಜು ಮಕ್ಕಳಿಗೆ ಶಿವಾಜಿಯ ಸಾಧನೆ, ಮಾತೃಪ್ರೇಮ, ಕರ್ತವ್ಯನಿಷ್ಠೆ, ರಾಷ್ಟ್ರಪ್ರೇಮ ತಿಳಿಸಬೇಕಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಒತ್ತಾಯಿಸಿದರು.
ಹುಳಿಯಾರಿನಲ್ಲಿ ಶನಿವಾರ ನಡೆದ ಶ್ರೀ ಭತ್ರಪತಿ ಶಿವಾಜಿ ಮಹಾರಾಜ್ ಛಾರಿಟಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿವಾಜಿ ಮಹಾರಾಜರು ಜಗತ್ತಿನ ಯುವ ಜನತೆಗೆ ಮಾದರಿಯಾಗಿದ್ದಾರೆ. ಸಾಮಾನ್ಯ ಯುವಕರ ಬೆಂಬಲದಿಂದ ಸ್ವಾಭಿಮಾನಿ ರಾಜ್ಯ ನಿರ್ಮಾಣ ಮಾಡಿದ ಶಿವಾಜಿಯ ಸಾಧನೆ ಸಾಮಾನ್ಯವಾದುದಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಕ್ರಾಂತಿಕಾರಿಗಳಿಗೆ ಶಿವಾಜಿ ಸಾಧನೆಗಳೇ ಆದರ್ಶಗಳಾಗಿದ್ದವು. ಹಾಗಾಗಿ ಶಿವಾಜಿ ಮಹಾರಾಜರ ಜಯಂತಿ ಆಚರಿಸುವ ಮೂಲಕ ಯುವಜನೆತೆ ಶಿವಾಜಿ ಬಗ್ಗೆ ಮಾಹಿತಿ ತಿಳಿಸಬೇಕಿದೆ ಎಂದರು.
ಮುಖ್ಯ ಶಿಕ್ಷಕ ಬಿ.ಬಿ.ನಂದವಾಡಗಿ ಅವರು ಮಾತನಾಡಿ ಸಂಘ-ಸಂಸ್ಥೆಗಳನ್ನು ಸ್ಥಾಪಿಸುವುದಕ್ಕಿಂತ ಅವುಗಳನ್ನು ಕ್ರಿಯಾಶೀಲವಾಗಿಡುವುದು ಸವಾಲಿನ ಕೆಲಸವಾಗಿದೆ. ಸಂಘದ ಸದಸ್ಯರಲ್ಲಿ ಒಗ್ಗಟ್ಟು ಕಾಪಾಡುವುದು, ಕೇಳಿಬರುವ ಅಪವಾದಗಳನ್ನು ಎದುರಿಸುವುದು, ಆರ್ಥಿಕ ಕ್ರೂಢಿಕರಣ ಹೀಗೆ ಅನೇಕ ಜವಾಬ್ದಾರಿಗಳಿವೆ. ಈ ನಿಟ್ಟಿನಲ್ಲಿ ಎಲ್ಲರಲ್ಲೂ ಸೇವೆಯೊಂದೆ ಮೂಲಮಂತ್ರವಾಗಬೇಕು. ಅದ್ದೂರಿತನ ಕೈ ಬಿಟ್ಟು ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡಬೇಕು. ಬಡ ರೋಗಿಗಳು, ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಬೇಕು ಎಂದು ಸಲಹೆ ನೀಡಿದರು.
ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್, ಜಯಕರ್ನಾಟಕ ಅಧ್ಯಕ್ಷ ಮೋಹನ್ ಕುಮಾರ್ ರೈ, ಗ್ರಾಪಂ ಸದಸ್ಯರುಗಳಾದ ಶಿವಾಜಿರಾವ್, ಚಂದ್ರಶೇಖರ್, ಬಾಪುರಾವ್, ಗ್ರಾಮದ ಮುಖಂಡ ಪಾಂಡಪ್ಪ, ಭಜರಂಗದಳದ ಮೋಹನ್, ಸಮಾಜಸೇವಕ ಕೆ.ಎನ್.ಉಮೇಶ್, ಶಿವಾಜಿ ಮಹಾರಾಜ್ ಛಾರಿಟಬಲ್ ಟ್ರಸ್ಟ್ನ ಸುರೇಶ್ ರಾವ್, ಯತೀಶ್ ರಾವ್, ವಿಠಲ್ ರಾವ್, ನರಾಯಣ್ ರಾವ್, ವೆಂಕಟೇಶ್ ರಾವ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ