ಹುಳಿಯಾರು:
ಹುಳಿಯಾರು ಸಮೀಪದ ಮತಿಗೆಟ್ಟ ಗ್ರಾಮದ ಎಸ್ಎಬಿವಿಪಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ಸಹಯೋಗದೊಂದಿಗೆ ಏಡ್ಸ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮತಿಘಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಸುಷ್ಮಾ ಅವರ ಸಲಹೆಯಂತೆ ಕಿರಿಯ ಆರೋಗ್ಯ ಸಹಾಯಕರಾದ ಶಿವಮೂರ್ತಿ ಮತ್ತು ಕಿರಿಯ ಆರೋಗ್ಯ ಸಹಾಯಕಿ ಲತಾಮಣಿ ಅವರು ಎಚ್ಒನ್ಎನ್ಒನ್, ಎಚ್ಐವಿ ಮತ್ತು ಏಡ್ಸ್ ಬಗ್ಗೆ ಹದಿಹರೆಯದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮಾಹಿತಿಯನ್ನು ನೀಡಿದರು.
ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಯ ದೇಹವು ಅನೇಕ ರೋಗಗಳಿಗೆ ತುತ್ತಾಗುತ್ತದೆ. ಇದರಲ್ಲಿ ಏಡ್ಸ್ನಂತಹ ಮಾರಣಾಂತಿಕ ಕಾಯಿಲೆ ಸಹ ಒಂದಾಗಿದೆ. ಹಾಗಾಗಿ ಶಿಸ್ತು ಮತ್ತು ಆರೋಗ್ಯ ಪೂರ್ಣ ಬದುಕನ್ನು ನಿಮ್ಮದಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ರೋಗ ಉಲ್ಬಣವಾಗುವ ಮುನ್ನವೇ ಎಚ್ಚರ ವಹಿಸುವುದು ಅವಶ್ಯಕತೆಯಾಗಿದ್ದು ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟು ಉಚಿತವಾಗಿ ಸೂಕ್ತ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಿ ಎಂದರಲ್ಲದೆ ವಿದ್ಯಾರ್ಥಿನಿಯರಿಗೆ ಅವರ ಶಾರೀರಿಕ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಲು ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ದೂರವಿರಬೇಕು ಎನ್ನುವ ಕಿವಿಮಾತನ್ನು ತಿಳಿಸಿದರು.
ಮುಖ್ಯೋಪಾಧ್ಯಾಯರಾದ ಉಮಾದೇವಿಯವರು ಏಡ್ಸ್ ಹರಡುವಿಕೆ ಹಾಗೂ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಶಾಲಾ ಸಿಬ್ಬಂದಿ ವರ್ಗದವರೊಂದಿಗೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ