ಬೆಂಗಳೂರು
ಜ್ವರದ ಚಿಕಿತ್ಸೆಗೆಂದು ತೆರಳಿದ್ದ ಬಾಲಕಿಗೆ ಇಂಜೆಕ್ಷನ್ ನೀಡಿ ಶಾಶ್ವತವಾಗಿ ಅಂಗವಿಕಲೆಯನ್ನಾಗಿ ಮಾಡಿ ಪರಾರಿಯಾಗಿರುವ ವೈದ್ಯನಿಗಾಗಿ ಸಿದ್ದಾಪುರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಸಿದ್ದಾಪುರ ಭೈರಸಂದ್ರದ ವೈದ್ಯ ಆಸೀಫ್ ಹುಸೇನ್ ಪರಾರಿಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಆಯಿಶಾ ತಾಜ್ ಎನ್ನುವ ಬಾಲಕಿಯನ್ನು ಪೋಷಕರು ವೈದ್ಯ ಆಸೀಫ್ ಬಳಿ ಕರೆದುಕೊಂಡು ಹೋಗಿದ್ದಾಗ ಜ್ವರಕ್ಕೆ ಚಿಕಿತ್ಸೆ ನೀಡುವುದಾಗಿ ಇಂಜೆಕ್ಷನ್ ಮಾಡಿದ್ದು ಆ ಇಂಜೆಕ್ಷನ್ನಿಂದ ಶಾಶ್ವತವಾಗಿ ಬಾಲಕಿ ಎಡಗಾಲನ್ನು ಕಳೆದುಕೊಂಡಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.
ಇದರಿಂದ ಪೋಷಕರು ಭಯಭೀತರಾಗಿ ವೈದ್ಯನನ್ನು ತರಾಟೆಗೆ ತೆಗೆದುಕೊಂಡು,ಹೆಚ್ಚುವರಿ ಚಿಕಿತ್ಸೆ ನೀಡಿ ಆಯಿಶಾ ಮೊದಲಿನಂತೆ ಓಡಾಡುವಂತೆ ಮಾಡಬೇಕು. ಇಲ್ಲವಾದಲ್ಲಿ ಪೊಲೀಸ್ ದೂರು ನೀಡುತ್ತೇನೆ ಎಂದು ಆಯಿಶಾ ತಂದೆ ಅಮ್ಜದ್ ಎಚ್ಚರಿಕೆ ನೀಡಿದ್ದರು.
ಪೊಲೀಸರಿಗೆ ದೂರು ನೀಡಿದರೆ ಬಂಧನವಾಗುತ್ತೇನೆ ಎಂಬ ಭಯದಿಂದ ತಪ್ಪನ್ನು ಒಪ್ಪಿಕೊಂಡು ತಾನೇ ಆಯಿಶಾಗೆ ಹೆಚ್ಚಿನ ಚಿಕಿತ್ಸೆ ಕೊಡಿಸಿ ಅದರ ಖರ್ಚು ವೆಚ್ಚವನ್ನು ನೋಡಿಕೊಳ್ಳುತ್ತೇನೆ ಎಂದು ಲಿಖಿತವಾಗಿ ಬರೆದುಕೊಟ್ಟು ಸಹಿ ಹಾಕಿದ್ದಾನೆ. ಘಟನೆ ನಡೆದು ನಾಲ್ಕು ವರ್ಷಗಳು ಕಳೆದರೂ ಆಯಿಶಾ ಅಂಗವೈಕಲ್ಯವನ್ನು ಹೋಗಲಾಡಿಸುವುದಾಗಿ ಹೇಳಿದ್ದ ವೈದ್ಯ ಚಿಕಿತ್ಸೆಯ ಸೌಲಭ್ಯ ನೀಡದೆ ಮೋಸ ಮಾಡಿದ್ದಾನೆ.ಬಾಲಕಿಯ ಪೋಷಕರು ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದು.ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ