ಬಳ್ಳಾರಿ
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಕೀಳುಮಟ್ಟದ ದ್ವೇಷ, ಕುತಂತ್ರ ರಾಜಕಾರಣದಿಂದಾಗಿ ಮಾಜಿ ಸಚಿವ ಜಿ.ಜನಾರ್ಧನ್ ರೆಡ್ಡಿ ಅವರನ್ನು ಬಂಧನ ಮಾಡಿರುವುದು ಖಂಡನೀಯವೆಂದ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕೆ.ಶಶಿಕಲಾ ಕೃಷ್ಣಮೋಹನ್ ತಿಳಿಸಿದ್ದಾರೆ.
ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ನೂರ್ ಬಾಷಾ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕೆ.ಶಶಿಕಲ ಕೃಷ್ಣಮೋಹನ್ ಇನ್ನಿತರರು ಉದ್ದೇಶಪೂರ್ವಕವಾಗಿ ರೆಡ್ಡಿ ಅವರಿಗೆ ಬೇಲ್ ಸಿಗದಂತೆ ಮಾಡಿ ಅನ್ಯಾಯವಾಗಿ ಜೈಲು ಪಾಲು ಮಾಡಿದ್ದಾರೆ. ನಮ್ಮ ಪಕ್ಷದ ನಾಯಕರು ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ರೆಡ್ಡಿ ಬಂಧನದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಕಳೆದ ಒಂದು ತಿಂಗಳ ಹಿಂದೆಯೇ ಎ-1 ಆರೋಪಿ ಆಗಿರುವ ಫರೀದ್ ರೆಡ್ಡಿ ಅವರ ಬಗ್ಗೆ ಹೇಳಿದ್ದರೆ, ಸಿಸಿಬಿಯವರು ಏಕೆ ವಿಚಾರಣೆ ನಡೆಸಲಿಲ್ಲ? ಎಂದು ಪ್ರಶ್ನಿಸಿದರು.
ಮಾಧ್ಯಮಗಳಲ್ಲಿ ಜನಾರ್ಧನ್ ರೆಡ್ಡಿ ಅವರ ಬಗ್ಗೆ ಬಂದ ಮಾಹಿತಿ ಆಧರಿಸಿ ನಾವು ಈ ಸುದ್ದಿಗೋಷ್ಠಿ ನಡೆಸುತ್ತಿದ್ದೇವೆ. ಆ್ಯಂಬಿಡೆಂಟ್ ಕಂಪನಿಯ ಸಂಸ್ಥಾಪಕರು ಜನಾರ್ಧನ್ ರೆಡ್ಡಿಯವರಲ್ಲ. ಅದರಲ್ಲಿ ಅವರ ಪಾತ್ರವೂ ಇಲ್ಲ. ಕಂಪನಿಯಲ್ಲಿ ಹಣ ತೊಡಗಿಸಿಕೊಂಡಿರುವ ಗ್ರಾಹಕರು ರೆಡ್ಡಿ ಅವರನ್ನು ನಂಬಿ ಹಣ ತೊಡಗಿಸಿಲ್ಲ. ಈ ಕುರಿತು ರೆಡ್ಡಿ ಅವರ ವಿರುದ್ಧ ಗ್ರಾಹಕರು ಪೊಲೀಸ್ ಪ್ರಕರಣ ದಾಖಲಿಸಿಲ್ಲ.
ನ್ಯಾಯಾಲಯದ ಮೊರೆಯೂ ಹೋಗಿಲ್ಲ. ಪೊಲೀಸ್ ಠಾಣೆಯಲ್ಲೂ ಕೂಡ ದಾಖಲಾದ ಪ್ರಾಥಮಿಕ ತನಿಖಾ ವರದಿಯಲ್ಲಿ ಜನಾರ್ಧನ್ ರೆಡ್ಡಿ ಅವರ ಹೆಸರಿಲ್ಲ. ಆ್ಯಂಬಿಡೆಂಟ್ ವಂಚಕ ಕಂಪನಿಯ ಸೂತ್ರಧಾರಿ ಫರೀದ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಆತನಿಗೆ ಬೇಲ್ ಸಿಕ್ಕಿದೆ. ಉಳಿದ 4 ಜನ ಆರೋಪಿಗಳಿಗೆ ಬೇಲ್ ಸಿಗುತ್ತಿದೆ. ಆದರೆ ರೆಡ್ಡಿ ಅವರಿಗೆ ಅನ್ಯಾಯವಾಗಿ ಬೇಲ್ ಸಿಗದೇ ಜೈಲು ಪಾಲಾಗುತ್ತಾರೆ ಅಂದರೆ ವ್ಯವಸ್ಥೆ ಹೇಗಿದೆ? ಎನ್ನೋದನ್ನ ನಾವು ಗಮನಿಸಬಹುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ಹೊನ್ನೂರಪ್ಪ, ಬಿಜೆಪಿ ಮುಖಂಡರಾದ ಕೆಎಸ್ ದಿವಾಕರ್, ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು, ಫಾರುಕ್, ಹುಂಡೇಕಾರ್ ರಾಜೇಶ್ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ