ಬಳ್ಳಾರಿ
ಹಜರತ್ ಟಿಪ್ಪು ಸುಲ್ತಾನ್ ಸೇರಿದಂತೆ ಮಹನೀಯರ ಜಯಂತಿಗಳಲ್ಲಿ ಯಾವುದೋ ಒಂದು ಕಾರಣಕ್ಕೆ ಹುಳುಕುಗಳನ್ನು ಹುಡುಕುವುದನ್ನು ಬಿಟ್ಟು ಆ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮತ್ತು ನಾಡಿಗೆ ತೋರಿಸಿಕೊಡುವ ನಿಟ್ಟಿನಲ್ಲಿ ಸಹಕರಿಸುವ ಕೆಲಸ ಮಾಡಬೇಕು ಎಂದು ಬಳ್ಳಾರಿ ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಅವರು ಹೇಳಿದರು.
ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ರಾಜಕಾರಣ ಸೇರಿದಂತೆ ಕೆಲ ಕಾರಣಗಳಿಂದ ಕೆಲದುಷ್ಟ ಶಕ್ತಿಗಳು ಸಮಾಜವನ್ನು ಒಡೆದು ಆಳಲು ಪ್ರಯತ್ನಿಸುತ್ತಿದ್ದು,ಇಂತವುಗಳಿಗೆಲ್ಲ ಅಸ್ಪದ ನೀಡದೇ ರಾಷ್ಟ್ರಪ್ರೇಮಿ, ಎಲ್ಲ ಜನಾಂಗಗಳ ಜನರನ್ನು ಪ್ರೀತಿಯಿಂದ ಕಂಡ, ಸರ್ವಧರ್ಮ ಸಮನ್ವಯಕಾರ ಟಿಪ್ಪು ಅವರ ಜಯಂತಿಯನ್ನು ಮನುಕುಲದ ಆಚರಣೆಯನ್ನಾಗಿ ಮಾಡಬೇಕು ಎಂದರು.
ಯಾರು ಕೂಡ ಇದೇ ಜಾತಿ,ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಬರಲ್ಲ ಎಂಬುದನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ ಉಗ್ರಪ್ಪ ಅವರು, ಜಯಂತಿಗಳನ್ನು ಜಾತಿ,ಧರ್ಮದ ಆಧಾರದಲ್ಲಿ ವಿಂಗಡಿಸದೇ ಮನುಕುಲದ ಅಭಿವೃದ್ಧಿಗಾಗಿ ಮಾಡಬೇಕು ಎಂದರು.
ನನ್ನನ್ನು ಬಳ್ಳಾರಿ ಕ್ಷೇತ್ರದ ಮತದಾರರು ಅಪಾರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದು,ನನ್ನ ಉಸಿರಿರುವವರೆಗೆ ತಮ್ಮ ಸೇವಕನಾಗಿ ಕೆಲಸ ಮಾಡುವುದಾಗಿ ಭಾವುಕರಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿದರು.
ಹಂದ್ಯಾಳು ಸರಕಾರಿ ಪ್ರೌಢಶಾಲೆ ಸಹಶಿಕ್ಷಕ ಸೈಯದ್ ಮೊಹಿನುದೀನ್ ಖಾದ್ರಿ ಅವರು ವಿಶೇಷ ಉಪನ್ಯಾಸ ನೀಡಿದರು.ಕೆ.ದೊಡ್ಡಬಸಪ್ಪ ಮತ್ತು ಸಂಗಡಿಗರು ದೇಶಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ನೃತ್ಯಪಟು ಎಸ್.ಕೆ.ಆರ್.ಜಿಲಾನಿಭಾಷಾ ಮತ್ತು ಸಂಗಡಿಗರು ದೇಶಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಅರುಣ ರಂಗರಾಜನ್, ಜಿಪಂ ಸದಸ್ಯ ಮಾನಯ್ಯ, ಮಹಾನಗರ ಪಾಲಿಕೆ ಸದಸ್ಯ ಬಸವನಗೌಡ, ಮುಖಂಡರಾದ ಗಿರಿಮಲ್ಲಪ್ಪ,ಕಪಗಲ್ ರಸೂಲ್ಸಾಬ್, ಹುಮಾಯೂನ್ಖಾನ್, ಮುನ್ನಾಭಾಯಿ ಸೇರಿದಂತೆ ಅನೇಕರು ಇದ್ದರು. ಬಸವರಾಜ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸ್ವಾಗತಿಸಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ವತಿಯಿಂದ ರಕ್ತದಾನ ಶಿಬಿರ ಇದೇ ಸಂದರ್ಭದಲ್ಲಿ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ