ಚಿತ್ರದುರ್ಗ;
ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಕೇವಲ ವಾಕಿಂಗ್ ಅಥವಾ ಯೋಗ ಮಾಡಿದರೆ ಸಾಲದು ನಮ್ಮ ದೇಹ ಪ್ರಕೃತಿಗೆ ತಕ್ಕಂತೆ ಆಹಾರ ಸೇವನೆಯಲ್ಲೂ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಭಾರತ್ ಸ್ವಾಭಿಮಾನ್ ಟ್ರಸ್ಟ್ ನ ಅಧ್ಯಕ್ಷರಾದ ಮಲ್ಲಿಕಾರ್ಜುನಪ್ಪ ಕರೆ ನೀಡಿದರು.
ತಾಲ್ಲೂಕಿನ ಚೋಳಗಟ್ಟ/ಗಾರೇಹಟ್ಟಿಯಲ್ಲಿ ಹರಿದ್ವಾರದ ಯೋಗ ಪ್ರಚಾರಕ ಪ್ರಕಲ್ಪದಡಿಯಲ್ಲಿ ಭಾರತ ಸ್ವಾಭಿಮಾನ್ ಟ್ರಸ್ಟ್, ಚಿತ್ರದುರ್ಗ ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ಶ್ರೀ ಚೋಳೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗಾರೇಹಟ್ಟಿ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿರುವ ಹತ್ತು ದಿನಗಳ ಉಚಿತ ಯೋಗ, ಪ್ರಾಣಾಯಾಮ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಿಹಿತಿಂಡಿಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಮಾರಾಟ ಮಾಡುವ ಎಲ್ಲಾ ಬ್ರ್ಯಾಂಡೆಡ್ ಕಂಪನಿಗಳು ರುಚಿ ರುಚಿಯಾದ, ಬಾಯಲ್ಲಿ ನೀರು ಬರಿಸುವ ಸಿಹಿ ತಿಂಡಿಗಳನ್ನು ತಯಾರಿಸಲು ಆರೋಗ್ಯಕ್ಕೆ ಮಾರಕವಾದ, ಡಾಲ್ಡಾ, ಮೈದಾಹಿಟ್ಟು, ಸಕ್ಕರೆ ಹಾಗೂ ಬಣ್ಣಗಳನ್ನು ಕಡ್ಡಾಯವಾಗಿ ಬಳಸುತ್ತವೆ. ಸಿಹಿ ತಿಂಡಿ ತಯಾರಿಸಲು ದೊಡ್ಡ ಪ್ರಮಾಣದಲ್ಲಿ ಬಳಸುವ ಮೈದಾಹಿಟ್ಟು ಬಿಳಿ ವಿಷ ಎಂದೇ ಕುಖ್ಯಾತಿ ಪಡೆದಿದೆ, ಗೋಧಿಯಿಂದ ಮೈದಾಹಿಟ್ಟನ್ನು ಉತ್ಪಾದಿಸಲು ಆರೋಗ್ಯಕ್ಕೆ ಮಾರಕವಾದ “ಬೆಂಜೈನ್ ಫೆರಾಕ್ಸೈಡ್” ಹಾಗೂ “ಪೋಟಾಷಿಯಮ್ ಬ್ರೊಮಾಯಿಟ್” ಎಂಬ ರಾಸಾಯನಿಕ ಬಳಸಲಾಗುತ್ತದೆ. ಈ ರಾಸಾಯನಿಕವನ್ನು ಬಳಸಿ ತಯಾರಿಸಿದ ಆಹಾರ ಸೇವೆನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು
ಮೈದಾಹಿಟ್ಟಿನಿಂದ ತಯಾರಿಸಿದ ಸಿಹಿ ತಿಂಡಿಗಳು ಹಾಗೂ ಬೇಕರಿ ತಿಂಡಿಗಳನ್ನು ನಿರಂತರವಾಗಿ ತಿಂದರೆ ಸಕ್ಕರೆ ಕಾಯಿಲೆ, ಬೊಜ್ಜು,, ಹೃದಯ ಸಮಸ್ಯೆ ಸಹಿತ ನಾನಾ ರೀತಿಯ ಕಾಯಿಲೆಗಳಿಗೆ ರಹದಾರಿ ಮಾಡಿಕೊಟ್ಟಂತೆ. ಮೈದಾ ಹಿಟ್ಟು ಎಷ್ಟು ಅಪಾಯಕಾರಿ ಎಂದರೆ ಇದರಲ್ಲಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವ ಯಾವ ಸತ್ವವೂ ಇಲ್ಲ, ಇರುವೆಗಳು ಸಹ ಮೈದಾಹಿಟ್ಟಿನ ಹತ್ತಿರ ಸುಳಿಯುವುದಿಲ್ಲ , ನೀವು ಏನಾದರೂ ತಿನ್ನುವ ಮುಂಚೆ ಅದು ನಮ್ಮ ಆರೋಗ್ಯಕ್ಕೆ ಮಾರಕವೊ ಪೂರಕವೊ ಎಂಬುದನ್ನು ತಿಳಿದುಕೊಂಡು ತಿನ್ನಿ ನಿಮ್ಮ ಹೊಟ್ಟೆಯನ್ನು ಕಸದಬುಟ್ಟಿಯನ್ನಾಗಿ ಮಾಡಿಕೊಳ್ಳಬೇಡಿ” ಎಂದು ತಿಳಿಸಿದರು.
ಯೋಗಗುರು ರವಿ ಕೆ.ಅಂಬೇಕರ್ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿ ಮಾತನಾಡುತ್ತಾ ” ಇಂದಿನ ಯಾಂತ್ರಿಕ ಜೀವನದಲ್ಲಿ ಎಲ್ಲಾ ವಯಸ್ಸಿನವರಿಗೂ ಯೋಗ ಅವಶ್ಯವಾಗಿ ಬೇಕಾಗಿದೆ, ಬೊಜ್ಜು ಇರುವವರು ಯೋಗ ಮಾಡಿ ಹತ್ತು ದಿನಗಳಲ್ಲಿ ನೀವು 3ರಿಂದ5 ಕೆ.ಜಿ.ಯವರೆಗೂ ತೂಕ ಕಡಿಮೆ ಮಾಡಿಕೊಳ್ಳಬಹುದು, ಯೋಗದ ಜೊತೆಗೆ ಅಕ್ಯಪ್ರೆಶರ್, ಯೋಗ ಮುದ್ರೆಗಳು, ಅಭ್ಯಾಸಮಾಡಿ ಮಾನಸಿಕ ಒತ್ತಡ, ಬಿ.ಪಿ., ಸಕ್ಕರೆ ಕಾಯಿಲೆ, ಹೃದಯ ಸಂಭಂಧಿಸಿದ ಕಾಯಿಲೆಗಳಾದ ಅಸ್ತಮಾ, ಬೆನ್ನುನೋವು, ಮಂಡಿನೋವು ಹೀಗೆ ಎಲ್ಲಾ ಕಾಯಿಲೆಗಳನ್ನು ವಾಸಿಮಾಡಿಕೊಳ್ಳಬಹುದು ನೀವು ದಿನದ 24ಗಂಟೆಗಳಲ್ಲಿ ನಿಮ್ಮ ದೇಹಾರೋಗ್ಯಕ್ಕಾಗಿ ಒಂದು ಗಂಟೆ ಮೀಸಲಿಡಿ ನೀವು ಯಾವುದೇ ವೈದ್ಯರ ಬಳಿ ಹೋಗುವ ಅವಶ್ಯಕತೆ ಬರುವುದಿಲ್ಲ ” ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗ್ರಾಮದ ಚೋಳೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಿ.ವೀರೇಶ್ ಅಧ್ಯಕ್ಷತೆವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಮಂಜುನಾಥ್, ಅಣಜಿ ವೀರಣ್ಣ, ಗಗನ್ ಕುಮಾರ್, ರಾಜುಬೇದ್ರೆ ಭಾಗವಹಿಸಿದ್ದರು.