ಸೇವೆ-ಅಧಿಕಾರ ಒಂದಾಗುವ ವರೆಗೂ ಶಾಂತಿ ಅಸಾಧ್ಯ..!!

ಸಿರಿಗೆರೆ:

      ಸೇವೆ ಮತ್ತು ಅಧಿಕಾರ ಒಂದಾಗುವವರೆಗೂ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ತರಳಬಾಳು ಬೃಹನ್ಮಠದ ಡಾ.ಶ್ರೀಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

      ಸಿರಿಗೆರೆಯಲ್ಲಿ ಮಂಗಳವಾರ ಸಂಜೆ ಸರಳವಾಗಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಆಶೀರ್ವಚನ ನೀಡಿದ ಅವರು, ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಘೋರ ಘಟನೆಗಳು ಜಗತ್ತಿನ ಯಾವುದೇ ಭಾಗದಲ್ಲಿ ನಡೆಯದಿರಲಿ. ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿ ಅತ್ಯಂತ ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

      ಭಾರತದ ವೇದಗಳ ಆಶಯದಂತೆ ಜಗತ್ತಿನ ಜನ ಶಾಂತಿ ಬಯಸುತ್ತಿದ್ದಾರೆ. ಅಲ್ಲದೇ, ಶಾಂತಿ ನೆಲಸಬೇಕೆಂದು ಎಲ್ಲಾ ದೇಶದ ನಾಯಕರು ಹೇಳುತ್ತಿದ್ದಾರೆ. ಆದರೆ, ಅವರೆಲ್ಲರೂ ಅಧಿಕಾರದಲ್ಲಿದ್ದಾಗ ಏನು ಮಾಡಿದರು ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಯಾರಿಗೆ ಅಧಿಕಾರ ಇದೆಯೋ ಅವರಿಗೆ ಸೇವಾ ಮನೋಭಾವ ಇಲ್ಲವಾಗಿದೆ. ಸೇವಾ ಮನೋಭಾವ ಇದ್ದವರಿಗೆ ಅಧಿಕಾರ ಇಲ್ಲದಂತಾಗಿದೆ. ಸೇವೆ ಮತ್ತು ಅಧಿಕಾರ ಎಲ್ಲಿಯವರೆಗೆ ಒಂದು ಆಗುವುದಿಲ್ಲವೊ ಅಲ್ಲಿಯವರೆಗೆ ಶಾಂತಿ ನೆಲೆಸಲು ಸಾಧ್ಯವೇ ಇಲ್ಲ ಎಂದರು.

ಯೋಧರ ನಿಧಿಗೆ 10 ಲಕ್ಷ ರೂ:

       ವೀರ ಯೋಧರ ತ್ಯಾಗ ಮತ್ತು ಬಲಿದಾನವೇ ಎಲ್ಲರ ನೆಮ್ಮದಿಗೂ ಕಾರಣವಾಗಿದೆ. ಈಗ ಅವರ ಕುಟುಂಬ ನೋವಿನಲ್ಲಿದೆ. ಮಠದಿಂದ ಯೋಧರ ನಿಧಿಗೆ 10 ಲಕ್ಷ ಕಳಿಸಲು ನಿರ್ಧರಿಸಿದ್ದೇವೆ. ಅದನ್ನು ಸಂಸದರು ಪ್ರಧಾನಮಂತ್ರಿಗೆ ತಲುಪಿಸಿ ಎಂದರು.ಏತ ನೀರಾವರಿ ಯೋಜನೆಗೆ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಅವರೆಲ್ಲರೂ ಅನುದಾನ ನೀಡಿದ್ದಾರೆ. ಸೂಳೆಕರೆ ಏತ ನೀರಾವರಿಗೆ ಯಡಿಯೂರಪ್ಪ ಸರ್ಕಾರ ಅನುದಾನ ನೀಡಿತ್ತು. ಆದರೆ, ಅದರ ಮೊತ್ತ ಹೆಚ್ಚಾದಾಗ ನಂತರ ಬಂದ ಮುಖ್ಯಮಂತ್ರಿಗಳು ನೀಡಿದ್ದಾರೆ. ಈ ಯೋಜನೆ ಆಗದಿದ್ದರೆ ಸಿರಿಗೆರೆ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗುತ್ತಿತ್ತು ಎಂದು ಹೇಳಿದರು.

       ಸಿಎಂ ಕುಮಾರಸ್ವಾಮಿಯವರು ಎರಡು ಏತ ನೀರಾವರಿ ಯೋಜನೆಗೆ ಅನುದಾನ ನೀಡಿದ್ದಾರೆ. ರಾಜ್ಯ ನೀರಾವರಿ ನಿಗಮ ಬೋರ್ಡ್ ಮೀಟಿಂಗ್‍ನಲ್ಲಿ 1,200 ಕೋಟಿ ರೂ. ವೆಚ್ಚದ ಜಗಳೂರು ಮತ್ತು ಭರಮಸಾಗರ ಏತ ನೀರಾವರಿ ಯೋಜನೆಗೆ ಅನುಮೋದನೆ ಸಿಕ್ಕಿದೆ. ಮಳೆಗಾಲದಲ್ಲಿ ವ್ಯರ್ಥವಾಗಿ ಹೋಗುವ ನೀರನ್ನು ಹಿಡಿದಿಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.

        ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಜನಾರ್ದನ ಸ್ವಾಮಿ, ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಕೆ.ಆರ್.ಜಯದೇವಪ್ಪ, ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap