ದಾವಣಗೆರೆ:
ಸಿಂದಗಿ ತಾಲೂಕಿನ ವಕೀಲ ದತ್ತು ಎಲ್.ಬಂಡಿವಡ್ಡರ್ ಅವರನ್ನು ಅಮಾನುಷವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ ಹಾಗೂ ವಕೀಲರಿಗೆ ರಕ್ಷಣೆಗೆ ಆಗ್ರಹಿಸಿ ನಗರದ ವಕೀಲರು ಶನಿವಾರ ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಅವರ ನೇತೃತ್ವದಲ್ಲಿ ಕೋರ್ಟ್ ಕಲಾಪ ಬಹಿಷ್ಕರಿಸಿದ ವಕೀಲರು, ನಂತರ ಕೋರ್ಟ್ ಆವರಣ ಮುಂದಿನ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.
ವಕೀಲ ದತ್ತು ಬಂಡಿವಡ್ಡರ ಅವರು ಅ.31ರಂದು ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿರುವಾಗ, ಯಾರೋ ದುಷ್ಕರ್ಮಿಗಳು ಅವರನ್ನು ಬರ್ಭರವಾಗಿ ಹತ್ಯೆ ಮಾಡಿದ್ದಾರೆ ಎಂದ ಅವರು, ನ್ಯಾಯಕ್ಕಾಗಿ ಶ್ರಮಿಸುವ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ. ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ ಎಂಬ ನೋವನ್ನು ತೋಡಿಕೊಂಡರು.
ವಕೀಲ ದತ್ತು ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ವಕೀಲರ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಲಿಂಗರಾಜ, ಉಪಾಧ್ಯಕ್ಷ ದಿವಾಕರ್ ಹೆಚ್, ಜಂಟಿ ಕಾರ್ಯದರ್ಶಿ ಬಿ.ಎಸ್.ಬಸವರಾಜ್, ಸಂಘದ ಪದಾಧಿಕಾರಿಗಳು ಅಲ್ಲದೆ ಹಿರಿಯ ವಕೀಲರಾದ ಶಾಮ್, ಯೋಗಿಶ್ವರ್, ಯು.ಜಿ.ಪಾಟೀಲ್, ಗುಮ್ಮನೂರು ಮಲ್ಲಿಕಾರ್ಜುನ, ಕಟಗಿಹಳ್ಳಿ ಮಠ, ಸಾಲಿಮಠ್, ಆಂಜನೇಯ ಗುರೂಜಿ, ಡಿ.ಪಿ. ಬಸವರಾಜ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ