ಚಳ್ಳಕೆರೆ
ರಾಷ್ಟ್ರೀಯ ಹಬ್ಬದ ಆಚರಣಾ ಸಮಿತಿ ಪ್ರತಿವರ್ಷದಂತೆ ಈ ವರ್ಷವೂ ಸಹ ಟಿಪ್ಪು ಜಯಂತಿ ಹಾಗೂ ಕನಕ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ದತಾ ಸಭೆಯನ್ನು ಶಾಸಕ ಟಿ.ರಘುಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಪ್ರಾರಂಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಟಿಪ್ಪು ಜಯಂತಿ ಹಾಗೂ ಕನಕ ಜಯಂತಿ ಕಾರ್ಯಕ್ರಮಗಳು ಯಶಸ್ಸಿಯಾಗಿ ಆಚರಿಸುವ ನಿಟ್ಟಿನಲ್ಲಿ ವಿವಿಧ ಸಮುದಾಯಗಳ ಮುಖಂಡರ ಸಹಯೋಗದಲ್ಲಿ ಈ ಪೂರ್ವ ಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದ ನಿಯಮಗಳ ಅನುಸಾರ ಪ್ರತಿಯೊಂದು ಕಾರ್ಯಕ್ರಮವನ್ನು ಆಚರಣೆ ಮಾಡಲೇ ಬೇಕಿದೆ. ಈ ಹಿನ್ನೆಲೆಯಲ್ಲಿ ಎರಡೂ ಜಯಂತಿ ಸಂಬಂಧಪಟ್ಟಂತೆ ಭಾಗವಹಿಸಿರುವ ಸಮುದಾಯದ ಮುಖಂಡರು ತಾಲ್ಲೂಕು ಆಡಳಿತದೊಂದಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಜೈತುಂಬಿ, ಅಲ್ಪಸಂಖ್ಯಾತ ಸಮಾಜದ ಮುಖಂಡ, ಎಸ್.ಎಚ್.ಸೈಯದ್, ಅನ್ವರ್ ಮಾಸ್ಟರ್, ಬಷಿರ್ ಹಯಾತ್, ಎಸ್.ಮುಜೀಬ್ ಮುಂತಾದವರು ಮಾತನಾಡಿ, ಟಿಪ್ಪು ಜಯಂತಿ ಆಚರಣೆಗೆ ಎಲ್ಲರೂ ಸಹಕಾರ ನೀಡಬೇಕು. ಯಾವುದೇ ಸಂದರ್ಭದಲ್ಲೂ ಶಾಂತಿ ಪರಿಪಾಲನೆಗೆ ಸಮುದಾಯ ಆದ್ಯತೆ ನೀಡುತ್ತಿದೆ ಎಂದರು.
ಕಾರ್ಯಕ್ರಮಗಳ ರೂಪುರೇಷಗಳ ಬಗ್ಗೆ ಸಮುದಾಯದ ಮುಖಂಡರು ನೀಡಿದ ಎಲ್ಲಾ ಸಲಹೆಗಳನ್ನು ದಾಖಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿವಿಧ ಯೋಜನೆಗಳನ್ನು ಅಲ್ಪಸಂಖ್ಯಾಯ ಸಮುದಾಯಕ್ಕೆ ಅನುಕೂಲವಾಗುವಂತೆ ಕಾರ್ಯಗತಗೊಳಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಕನಕ ಜಯಂತಿ ಆಚರಣೆಗೆ ಸಂಬಂಧಪಟ್ಟಂತೆ ನ.26ರ ಸೋಮವಾರ ಕನಕ ಜಯಂತಿ ಆಚರಣೆಯಾಗಲಿದ್ದು, ಸಮುದಾಯದ ಮುಖಂಡರು ನ.11ರಂದು ಪೂರ್ವಭಾವಿ ಸಭೆ ನಡೆಸಿ ತಹಶೀಲ್ದಾರ್ಗೆ ಕಾರ್ಯಕ್ರಮ ಯಶಸ್ಸಿಯ ಬಗ್ಗೆ ಚರ್ಚೆ ನಡೆಸುವರು ಎಂದು ಸಮಾಜದ ಹಿರಿಯ ಮುಖಂಡ, ಅಧ್ಯಕ್ಷ ಆರ್.ಮಲ್ಲೇಶಪ್ಪ ತಿಳಿಸಿದರು.
ಮದ್ಯ ಪ್ರವೇಶಿಸಿ ಮಾತನಾಡಿದ ಟಿ.ರಘುಮೂರ್ತಿ, ಕಳೆದ ಬಾರಿ ಕನಕ ಜಯಂತಿ ಆಚರಣೆ ಸಂದರ್ಭದಲ್ಲಿ ಸಮುದಾಯದ ಮುಖಂಡರೇ ಹಲವಾರು ವಿಷಯಗಳ ಬಗ್ಗೆ ಅಸಮದಾನಗೊಂಡಿದ್ದರು. ಆದರೆ, ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಿದ್ದರು. ಆದರೆ, ಈ ಬಾರಿ ಸಮಾಜದ ಮುಖಂಡರು ಎಲ್ಲರೂ ಸೇರಿ ಕನಕ ಜಯಂತಿ ಯಶಸ್ಸಿ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇಒ ಬಿ.ಎಲ್.ಈಶ್ವರಪ್ರಸಾದ್, ಪಿಎಸ್ಐ ಸತೀಶ್ನಾಯ್ಕ, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ, ತಿಪ್ಪಮ್ಮ, ಕುರುಬ ಸಮಾಜದ ಮುಖಂಡರಾದ ಎಂ.ಶಿವಲಿಂಗಪ್ಪ, ಮುಸ್ಲಿಂ ಸಮುದಾಯದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.