ಹರಪನಹಳ್ಳಿ :
ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ, ಆದರೆ ಒತ್ತಡದಿಂದ ಪ್ರೀತಿಯನ್ನು ವಂಚಿಸಬೇಡಿ. ಒತ್ತಡದಿಂದ ಬೆಳೆಸಿದರೆ ಸರಿಯಾದ ಸಂಸ್ಕಾರ ದೊರಕುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಪೂಜಾರ ಅಭಿಪ್ರಾಯಪಟ್ಟರು.
ಪಟ್ಟಣದ ಕೆಸಿಎ ಸಂಸ್ಥೆಯ ಆರ್ಎಸ್ಎನ್ ಸಮೂಹ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಳ್ಳುವ ಅನೇಕ ಮಾರ್ಗಗಳಿವೆ. ಜ್ಞಾನಾರ್ಜನೆಗೆ ಆಧಾರಸ್ತಂಭವಾಗಿರುವ ಯೂಟೂಬ್, ಗೂಗಲ್ನಂತಹ ತಾಣ ಸದ್ವಿನಿಯೋಗಪಡಿಸಿಕೊಳ್ಳಲು ಸಲಹೆ ನೀಡಿದರು.
ಕೆಸಿಎ ತುಂಬಾ ಹಳೆಯ ಸಂಸ್ಥೆಯಾಗಿದೆ. ನಿಂತ ನೀರಾಗದೆ, ನಿರಂತರ ಹರಿಯುತ್ತಿರುತ್ತದೆ. ಇಲ್ಲಿ ಓದಿದ ಅನೇಕರು ಉನ್ನತ ಸಾಧನೆ ಮಾಡಿದ್ದಾರೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಆದರ್ಶರನ್ನಾಗಿ ರೂಪಿಸಲು ಪರಿಶ್ರಮ ಪಡಬೇಕು, ಮಕ್ಕಳಲ್ಲಿ ಕಷ್ಟಗಳನ್ನು ಎದುರಿಸುವ ಗುಣ ಬೆಳೆಸಬೇಕು ಎಂದರು.
ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ರಾಜಶೇಖರ ಮಾತನಾಡಿ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ರೀತಿಯಲ್ಲಿ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಅತೀ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಕೊಡುವುದೇ ನಮ್ಮ ಸಂಸ್ಥೆಯ ಧ್ಯೇಯವಾಗಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ.ಸದ್ಯೋಜಾತಯ್ಯ, ಖಜಾಂಚಿ ಪಿ.ಅನಂತಶೆಟ್ಟಿ, ಎಚ್.ಎಂ.ಶಶಿಧರ, ತಜ್ಞವೈಧ್ಯ ಡಾ.ಮಹ್ಮದ್ಶಮೀರ್ ಮಾತನಾಡಿದರು. ಬೈಕ್ಸಾಹಸಿ ರಾಹುಲ್ ಕೃಷ್ಣ ಅವರನ್ನು ಸನ್ಮಾನಿಸಿದರು. ಶಿಕ್ಷಣ ಸಂಯೋಜಕ ಉದಯಶಂಕರ, ಸಿಆರ್ಪಿ ದೇವರಾಜಚಾರಿ, ಮುಖ್ಯಶಿಕ್ಷಕರಾದ ಸೋಗಿ ಕೊಟ್ರೇಶ್, ಕಾಶೀನಾಥ ಹಾಗೂ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳಿದ್ದರು. ರಾತ್ರಿ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ