ಬಸವಣ್ಣರನ್ನ ಸಾಕ್ಷಾತ್ಕರಿಸಿಕೊಂಡಿದ್ದ ಜಯದೇವಶ್ರೀ

ದಾವಣಗೆರೆ:

     ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರು ಬಸವಣ್ಣನವರನ್ನು ಸಾಕ್ಷಾತ್ಕರಿಸಿಕೊಂಡು, ಅವರ ಸಿದ್ಧಾಂತದಲ್ಲೇ ಬದುಕು ನಡೆಸಿದ್ದರು ಎಂದು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸ್ಮರಿಸಿದರು.

      ಇಲ್ಲಿನ ಶಿವಯೋಗಾಶ್ರಮದಲ್ಲಿ ಭಾನುವಾರ ಸಂಜೆ ನಡೆದ ಶ್ರೀ ಜಯದೇವ ಮುರುಘರಾಜೇಂದದ್ರ ಮಹಾಸ್ವಾಮೀಜಿ ಅವರ 62ನೇ ವರ್ಷದ ರಥೋತ್ಸವ ಮತ್ತು ವಚನಗ್ರಂಥ ಮೆರವಣಿಗೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯದೇವ ಶ್ರೀಗಳು ರಾದ್ಧಾಂತ, ವೇದಾಂತಕ್ಕೆ ಬದುಕನ್ನು ಸೀಮಿತಗೊಳಿಸಿಕೊಳ್ಳದೇ, ಬಸವ ಜೀವನ ನಡೆಸುವ ಮೂಲಕ ಬದುಕನ್ನು ಸಂಪಾದಿಸಿದರು. ಹೀಗಾಗಿ, ಅವರೊಬ್ಬ ಮಹಾನ್ ಸಂತರಂತೆ ಭಾಸವಾಗುತ್ತಾರೆ ಎಂದರು.

     ಬಸವಣ್ಣ ಅವರನ್ನು ಅರ್ಥ ಮಾಡಿಕೊಳ್ಳದ ಬದುಕು ಅರ್ಥಹೀನ, ಶರಣ ಪಥ, ಬಸವ ಪಥ ಎಂದರೆ, ಅದು ಒಂದು ರೀತಿಯ ‘ಅಗ್ನಿ’ರಥ ಇದ್ದಂತೆ, ಬಸವಣ್ಣ ಅವರದ್ದು ಶರಣ ಪಥ, ಬಸವ ಪಥ ಅದು ಆಗ್ನಿ ರಥವಾಗಿತ್ತು. ಶರಣ ಪಥವನ್ನು ಆಗ್ನಿ ರಥಕ್ಕೆ ಹೋಲಿಸಬೇಕಾಗಿದೆ ಅಂದರೆ, ಅಲ್ಲಿ ಕಾವು, ಅದು ಕ್ರಾಂತಿ ಕಾವು, ಪರಿವರ್ತನೆಯ ಕಾವು ಆಗಿತ್ತು ಎಂದು ಹೇಳಿದರು.

      ಸ್ವಾಮಿಗಳಾಗಲೂ ಸ್ವಾಮೀಜಿ ಆಗುವುದಲ್ಲ, ಸಮಾಜ ತಾಯಿ-ತಂದೆ ಬಂಧು-ಬಳಗವೆಂದು ತಿಳಿದು ಸಾಮಾಜಿಕ ಸ್ವರೂಪ ನೀಡುವರು ನಿಜವಾದ ಸ್ವಾಮೀಜಿಗಳು. ಅಷ್ಟೇ ಅಲ್ಲದೇ, ಸಮಾನತೆ, ಮಾನವೀಯತೆ ಮತ್ತು ಆಧ್ಯಾತ್ಮಗಳನ್ನು ಇಟ್ಟುಕೊಂಡಿರುವರು ಸ್ವಾಮೀಜಿ ಎಂದು ಹೇಳಿದರು.

      ಮುರುಘಾ ಮಠ ಸಮಾನತೆ ಮಾನ್ಯತೆ ನೀಡಿದ ಮಠ. ಆಸ್ಪಶ್ಯರಿಗೆ ಬಾಗಿಲು ತೆರೆದ ಸಂದರ್ಭದಲ್ಲಿ ಇದಕ್ಕೆ ಅಂದು ಕೆಲವರು ವ್ಯಂಗ್ಯವಾಡಿದರು. ಆದರೂ ಮಠ ಇಂದಿಗೂ ಅನೇಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಮಾನತೆಯನ್ನು ಪೋಷಿಸುತ್ತಿದೆ. ಆಧ್ಯಾತ್ಮದಿಂದ ಬದುಕು ಸುಂದರವಾಗಿ ರೂಪಿಸಿಕೊಳ್ಳುವಂತೆ ಮಾಡುತ್ತಿದೆ ಎಂದರು.

       ಜಯದೇವ ಗುರುಗಳು ಅನೇಕ ನಾಯಕರನ್ನು ಬೆಳೆಸಿದರು. ಬಿ.ಡಿ. ಜತ್ತಿ, ನಿಜಲಿಂಗಪ್ಪ ಸೇರಿದಂತೆ ಅನೇಕರು ಮುರುಘಾ ಮಠಕ್ಕೆ ಅಪಾರ ಗೌರವ ಹೊಂದಿದ್ದರು. ಇದಕ್ಕೆ ಉದಾಹರಣೆಯಂತೆ ದಾವಣಗೆರೆಯಲ್ಲಿ ಜೆಜೆಎಂ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ನಿಜಲಿಂಗಪ್ಪ ಅವರ ಕಾರಣಕರ್ತರು. ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆರ್ಥಿಕ ನೆರವು ನೀಡಿದ್ದು ಮುರುಘಾ ಮಠ ಅನ್ನುವುದನ್ನು ಯಾರು ಮರೆಯಬಾರದು ಎಂದು ಹೇಳಿದರು.

       ಭಾವಚಿತ್ರಗಳು ಗೆದ್ದಲು ಹಿಡಿದು ಹೋಗುತ್ತವೆ, ಅದು ಕಾಲಧರ್ಮ. ಆದರೆ, ನಮ್ಮ ನಮ್ಮ ಮನಸ್ಸಿನಲ್ಲಿ ಮಹಾನೀಯ ಭಾವನೆಗಳ ಚಿತ್ರವಿರಬೇಕು. ಜಯದೇವ ಗುರುಗಳ ಭಾವಚಿತ್ರ ಮನೆಯಲ್ಲಿದ್ದರೆ ಸಾಲದು ಭಾವನೆಗಳಲ್ಳು ಇರಬೇಕು. ಹೀಗಾಗಿ, ಅವರ ಭಾವಚಿತ್ರವನ್ನು ಮನೆ ಮನೆಯಲ್ಲಿ ತುಂಬಿಸಿಕೊಳ್ಲೋಣ ಎಂದರು.

       ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ರಾಜ್ಯ ಪ್ರಶಸ್ತಿ ವಿಜೇತ ಚಿಂದೋಡಿ ಬಂಗಾರೇಶ್ ಮಾತನಾಡಿದರು. ಕದಳಿ ವೇದಿಕೆ ಅಧ್ಯಕ್ಷೆ ಪ್ರಮೀಳಾ ನಟರಾಜ್ ಉಪಸ್ಥಿತರಿದ್ದರು. ಎಂ.ಕೆ. ಬಕ್ಕಪ್ಪ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap