ತುಮಕೂರು
ದೇಶೀ ತಳಿಯ ಗೋವುಗಳ ರಕ್ಷಣೆಗೆ ಕೆಂದ್ರ ಬಿಜೆಪಿ ನೇತೃತ್ವದ ಸರ್ಕಾರ ಬಜೆಟ್ನಲ್ಲಿ 750 ಕೋಟಿ ರೂ. ಮೀಸಲಿಟ್ಟಿರುವುದನ್ನು ಸ್ವಾಗತಿಸಿ ಬಿಜೆಪಿ ರೈತ ಮೋರ್ಚಾ ಮುಖಂಡರು ನಗರದ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಗೋ ಪೂಜೆ ನೆರವೇರಿಸಿ, ಸಕಾರವನ್ನು ಅಭಿನಂದಿಸಿದರು.ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಯಶಸ್ಸು ಸಿಗಲೆಂದೂ ಈ ವೇಳೆ ಪೂಜೆ ಸಲ್ಲಿಸಿದರು.
ಗೋ ಪೂಜೆ ನಂತರ ಮಾತನಾಡಿದ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ಪ್ರಧಾನಿ ನರೇಂದ್ರಮೋದಿ ಅವರು ಚುನಾವಣಾ ಪೂರ್ವದಲ್ಲಿ ರೈತರ ರಕ್ಷಣೆಗಾಗಿ ನೀಡಲಾಗಿದ್ದ ಭರವಸೆಗಳಲ್ಲಿ ಶೇಕಡ 95ರಷ್ಟು ಈಡೇರಿಸಿದ್ದಾರೆ. ಸಂಕಷ್ಟದ ರೈತರ ಆರ್ಥಿಕ ಸದೃಢತೆಗೆ ಹಲವು ದಿಟ್ಟ ಕಾರ್ಯಕ್ರಮ ಕೈಗೊಂಡು ರೈತರಿಗೆ ನೆರವಾಗಿದೆ ಎಂದರು.
ರೈತರ ಜೀವನಾಡಿಯಾದ ದೇಶಿ ತಳಿ ಗೋವುಗಳ ರಕ್ಷಣೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಕಾಮಧೇನು ಯೋಜನೆಗೆ ಮೋದಿಯವರ ಸರ್ಕಾರ 750 ಕೋಟಿ ರೂ.ಗಳನ್ನು ಮೀಸಲಿಟ್ಟು ಸಾರ್ಥಕ ಯೋಜನೆ ರೂಪಿಸಿದ್ದಕ್ಕೆ ಎಲ್ಲಾ ಹಳ್ಳಿಗಳಲ್ಲೂ ರೈತ ಮೋರ್ಚಾ ಕಾರ್ಯಕರ್ತರು ಗೋ ಪೂಜೆ ಮಾಡಿ, ಪ್ರಧಾನಿಯವರನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ ಎಂದು ಹೇಳಿದರು.ಕೇಂದ್ರ ಸರ್ಕಾರ ಕೈಗೊಂಡಿರುವ ರೈತರ ಪರವಾದ ಯೋಜನೆಗಳ ಬಗ್ಗೆ ಪ್ರತಿ ರೈತರಿಗೆ ಮನವರಿಕೆ ಮಾಡಿಕೊಡಲು ಕಾರ್ಯಕರ್ತರು ಮುಂದಾಗಬೇಕು ಎಂದು ಶಿವಪ್ರಸಾದ್ ತಿಳಿಸಿದರು.
ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬ್ಯಾಟರಂಗೇಗೌಡ ಮಾತನಾಡಿ, ದೇಶಿ ಗೋವುಗಳ ರಕ್ಷಣೆ ಎಂದರೆ ಅದು ರೈತರ ಬದುಕು ರಕ್ಷಿಸಿದಂತೆ, ಮೋದಿ ಸರ್ಕಾರ ಗೋ ರಕ್ಷಣೆಗೆ ಮಹತ್ವದ ಯೋಜನೆ ರೂಪಿಸಿರುವುದು ಶ್ಲಾಘನೀಯ ವಿಚಾರ ಎಂದರು.
ನಗರ ಬಿಜೆಪಿ ಅಧ್ಯಕ್ಷ ಸಿ ಎನ್ ರಮೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸ್ನೇಕ್ ನಂದೀಶ್, ನಗರ ಅಧ್ಯಕ್ಷ ಡಿ ಆರ್ ಬಸವರಾಜು, ಮುಖಂಡರಾದ ರುದ್ದೇಶ್, ಸಂದೀಪ್ಗೌಡ, ರಾಘವೇಂದ್ರ, ತರಕಾರಿ ಮಹೇಶ್, ಸರೋಜಗೌಡ. ಗೀತಾಶಿವಣ್ಣ, ಪ್ರಿಯಾರಾಜ್, ಜ್ಯೋತಿ, ಜಯಶ್ರೀ, ಮಂಗಳ ಮೊದಲಾದವರು ಭಾಗವಹಿಸಿದ್ದರು.