ದಾವಣಗೆರೆ:
ಸಹಜ ಶಿವಯೋಗದಿಂದ ವ್ಯಕ್ತಿಯೊಬ್ಬ ಮಹಾನ್ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ನಗರದ ಶಿವಯೋಗಾಶ್ರಮದಲ್ಲಿ ಲಿಂ.ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 62ನೇ ಸ್ಮರಣೋತ್ಸವ, ಶರಣ ಸಂಸ್ಕøತಿ ಉತ್ಸವದ ಪ್ರಯುಕ್ತ ಶನಿವಾರ ಬೆಳಿಗ್ಗೆ ಏರ್ಪಡಿಸಿದ್ದ 2ನೇ ದಿನದ ಸಹಜ ಶಿವಯೋಗದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವ್ಯಕ್ತಿಯು ಪತ್ರಿನಿತ್ಯ ಶಿವಯೋಗ ಧ್ಯಾನ ಮಾಡುವದರಿಂದ ಬಸವಣ್ಣನಂತೆ ಮೇಧಾವಿ, ಗೌತಮ ಬುದ್ಧನಂತೆ ಪ್ರಬುದ್ಧ, ಸಿದ್ಧರಾಮನಂತೆ ಕಾಯಕಯೋಗಿ ಸಾಧಕರಾಗಿ, ಮಹಾನ್ ಶಕ್ತಿಯಾಗಿ ಹೊರಹೊಮ್ಮಬಹುದು ಎಂದರು.
ಆಧುನಿಕ ಜೀವನ ಶೈಲಿಯಿಂದ ಮನುಷ್ಯ ವಿವಿಧ ಕಾಯಿಲೆಗಳಿಗೆ ತುತ್ತಾಗಿರುವ ಕಾರಣ, ವಿವಿಧ ವೇದನೆ ಅನುಭವಿಸುತ್ತಿದ್ದಾನೆ. ಇವುಗಳಿಂದ ಹೊರ ಬರಲು ಬೆಳಿಗ್ಗೆ ಎದು ಯೋಗ ಮಾಡುತ್ತಾರೆ. ಆದರೆ, ಯೋಗ ಮಾಡುವುದರಿಂದ ನಮ್ಮ ನೋವು, ಕಾಯಿಲೆಗಳು ತಾತ್ಕಾಲಿಕ ಶಮನವಾಗುತ್ತವೆ ವಿನಃ ಶಾಶ್ವತವಾಗಿ ಅಲ್ಲ. ಆದರೆ, ಶಿವಯೋಗ ಧ್ಯಾನದಿಂದ ಎಲ್ಲಾ ಕಾಯಿಲೆ, ಯಾತ, ವೇದನೆಗಳು ಶಾಶ್ವತವಾಗಿ ದೂರವಾಗಲಿವೆ ಎಂದು ಹೇಳಿದರು.
ಶಿವಯೋಗ ನಮ್ಮ ಒಳಗಿನ ಅಂತರಂಗವನ್ನು ಶುದ್ಧೀಕರಿಸುವುದರ ಜತೆಗೆ ಮನುಷ್ಯನ ಶಾಂತಿ, ನೆಮ್ಮದಿ, ಆರೋಗ್ಯಪೂರ್ಣ ಬದುಕಿಗೆ, ಸಂತೋಷಕ್ಕೆ ದಾರಿ ಮಾಡಿಕೊಡುತ್ತದೆ ಎಮದು ನುಡಿದರು.
ಲಿಂಗಾಯತ ಧರ್ಮದ ಪರಂಪರೆ, ತತ್ವಗಳು, ವಚನ ಅಧ್ಯಯನದಿಂದ ರೋಗಿಗಳು ಶಿವಯೋಗಿಗಳಾಗುತ್ತಾರೆಂಬುದನ್ನು 12ನೇ ಶತಮಾನದಲ್ಲಿ ಶರಣರು ಸಾಧಿಸಿ ತೋರಿಸಿದ್ದಾರೆ. ಶಿವಯೋಗದಲ್ಲಿ ವಿಜ್ಞಾನವೂ ಅಡಗಿದೆ. ಸೂಕ್ಷ್ಮವಾದ ರಹಸ್ಯಗಳು ಅಡಗಿವೆ. ಶಾಶ್ವತ ಪರಮಸುಖಕ್ಕೆ ಶಿವಯೋಗ ತಗೆದುಕೊಂಡು ಹೋಗುತ್ತದೆ. ಇದೊಂದು ಉತ್ಕøಷ್ಠ ಸಾಧನೆಯಾಗಿದೆ ಎಂದರು.
ಸಿರಸಂಗಿಯ ಶ್ರೀಬಸವ ಮಹಾಂತ ಸ್ವಾಮೀಜಿ ಮಾತನಾಡಿ, ಧ್ಯಾನದಿಂದ ಕೋಪ, ಒತ್ತಡ, ಚಿಂತೆಯನ್ನು ಕಳೆದುಕೊಳ್ಳಬಹುದೆಂಬುದನ್ನು ಗೌತಮ ಬುದ್ಧ ತೋರಿಸಿಕೊಟ್ಟಿದ್ದಾರೆ. ಶಿವಯೋಗ ಧ್ಯಾನದಿಂದಲೂ ಇವುಗಳನ್ನು ನಿವಾರಣೆ ಸಾಧ್ಯ ಎಂಬುದನ್ನು ಬಸವಾದಿ ಶಿವಶರಣರು ಸಾಧಿಸಿ ತೋರಿಸಿದ್ದಾರೆ. ಇಷ್ಟಲಿಂಗ ಪೂಜೆಯಿಂದ ಕೋಪ, ಒತ್ತಡ, ಚಿಂತೆ ಕಳೆದುಕೊಂಡು ಶಾಂತಿಯುತವಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು
ರಾವಂದೂರು ಮುರುಘಾ ಮಠದ ಶ್ರೀಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಶಿವಯೋಗ ಎಂದರೆ ಧ್ಯಾನ ಮಾಡುತ್ತಲೇ ನಮ್ಮನ್ನು ಮರೆತು ಐಕ್ಯಸ್ಥಾನಕ್ಕೆ ಹೋಗುವುದಾಗಿದೆ. ಮನಸ್ಸನ್ನು ಕೇಂದ್ರೀಕರಿಸುವುದಾಗಿದೆ. ಸಹಜ ಶಿವಯೋಗದ ಬಗ್ಗೆ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ನಾಡಿನಾದ್ಯಂತ, ದೇಶ-ವಿದೇಶಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದ್ದಾರೆಂದು ಹೇಳಿದರು.
ಪಾಲಿಕೆಯ ಉಪಮಹಾಪೌರ ಕೆ.ಚಮನ್ಸಾಬ್ ಮಾತನಾಡಿ, ಬಸವ ತತ್ವ ಮತ್ತು ಇಸ್ಲಾಂ ತತ್ವಗಳಲ್ಲಿ ಸ್ವಲ್ಪ ವ್ಯತ್ಯಾಸ ಇದ್ದರೂ, ಎರಡೂ ಧರ್ಮಗಲ್ಲಿ ಹೆಚ್ಚಿನ ಸಾಮ್ಯತೆ ಕಂಡು ಬರುತ್ತದೆ. ಏಕದೇವೋಪಾಸನೆ ಕುರಿತು ಎರಡೂ ಧರ್ಮಗಳಲ್ಲೂ ಪ್ರತಿಪಾದನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಗುರುಮಠಕಲ್ ಖಾಸಾಮಠದ ಶ್ರೀಶಾಂತವೀರ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ.ಶಿವಕುಮಾರ್, ಚಿಂದೋಡಿ ಚಂದ್ರಧರ, ಬೆಂಗಳೂರು ಕಾಂಗ್ರೆಸ್ ಮುಖಂಡ ನಿಖಿಲ್ ಕೊಂಡಜ್ಜಿ, ದಾಸೋಹಿಗಳಾದ ಜಿ.ನಾಗನೂರು, ಕಂದನಕೋವಿ ಶಿವಕುಮಾರ್, ಕಂಚಿಕೆರೆ ಮಹೇಶ್, ಎಸ್.ಓಂಕಾರಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ