ಹಗರಿಬೊಮ್ಮನಹಳ್ಳಿ:
ಪಟ್ಟಣ ಸೇರಿದಂತೆ ಕೊಟ್ಟೂರು, ಕೂಡ್ಲಿಗಿ ಪಟ್ಟಣಗಳಿಗೆ ಪೂರೈಕೆಯಾಗುತ್ತಿರುವ ಶುದ್ಧಕುಡಿಯುವ ನೀರು ಬೇಸಿಗೆಯಲ್ಲಿ ಸಮಸ್ಯೆ ತಲೆದೋರದಂತೆ ಈಗಲೇ ಅಗತ್ಯ ಕ್ರಮ ಕೈಗೊಳ್ಳಿ ಎಂದು ಶಾಸಕ ಎಸ್.ಭೀಮಾನಾಯ್ಕ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಕುಡಿಯುವ ನೀರಿನ ಪೂರೈಕೆಯ ಯೋಜನೆಯ ಸ್ಥಳವಾದ ತಾಲೂಕಿನ ಬನ್ನಿಗೋಳ ಜಾಕ್ವೆಲ್ ಬಳಿ ಗುರುವಾರ ಅಧಿಕಾರಿಗಳು ಮತ್ತು ಪುರಸಭೆಯ ಸದಸ್ಯರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು. ಬೇಸಿಗೆ ಆರಂಭಕ್ಕೂ ಮೊದಲೇ ತುಂಗಾಭದ್ರಾ ಹಿನ್ನಿರು ಸರಿಯುತ್ತಿರುವ ಕಾರಣ ಹ.ಬೊ.ಹಳ್ಳಿ, ಕೂಡ್ಲಿಗಿ, ಕೊಟ್ಟೂರು ಪಟ್ಟಣಗಳಿಗೆ ಕುಡಿಯುವ ನೀರಿನ ಸಮಸ್ಯೆ ಮುಂದೆ ತಲೆದೋರುವ ಸಾಧ್ಯತೆಯ ಹಿನ್ನಲೆಯಲ್ಲಿ ಈ ಬಾರಿ ಮುಂಜಾಗೃತ ಕ್ರಮಕೈಗೊಂಡು 20 ಲಕ್ಷ ರೂ ವೆಚ್ಚದಲ್ಲಿ ಬನ್ನಿಗೋಳ ಜಾಕ್ವೆಲ್ ಬಳಿ ಅನುಕೂಲವಾಗುವಂತ ಮೂರು ಕಡೆ ಮರಳು ತುಂಬಿದ ಚೀಲಗಳಿಂದ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದರು. ಇದಕ್ಕಾಗಿ ಪುರಸಭೆಯಲ್ಲಿ ಅನುದಾನ ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದರು.
ಕಳೆದ ವರ್ಷ ಮೂರು ಪಟ್ಟಣಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಆಗ ಸಂಬಂಧ ಪಟ್ಟ ಇಲಾಖೆಯಲ್ಲಿ ಮನವಿ ಮಾಡಿಕೊಂಡು ಭದ್ರಾ ನದಿಯಿಂದ ಅಗತ್ಯದಷ್ಟು 134 ಕೂಸೆಕ್ಸ್ ನೀರನ್ನು ಬಿಡಿಸಲಾಗಿತ್ತು. ಸಮಸ್ಯೆಯಾದಗ ಪರದಾಡುವುದಕ್ಕಿಂತ ಮುಂಜಾಗ್ರತ ಕ್ರಮವಾಗಿ ಸ್ಥಳಕ್ಕೆ ಭೇಟಿ ನೀಡಲಾಗಿದೆ ಎಂದ ಅವರು, ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 35 ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಪರೀಕ್ಷೆ ಕೂಡ ಮುಗಿದಿದ್ದು, ಮುಂದಿನ ದಿನಗಳಲ್ಲಿ ಯೋಜನೆಯಂತೆ ಗ್ರಾಮಗಳಿಗೆ ಶುದ್ಧಕುಡಿಯುವ ನೀರಿನ ಪೂರೈಕೆಮಾಡಲಾಗುತ್ತದೆ ಎಂದರು.
ಪುರಸಭೆ ಅಧ್ಯಕ್ಷ ತಳವಾರ ರಾಘವೇಂದ್ರ, ಸದಸ್ಯರಾದ ಅಲ್ಲಾಭಕ್ಷ, ಹುಡೇದ್ ಗುರುಬಸವರಾಜ, ಈ.ಭರತ್, ಮುಖಂಡರಾದ ಅಕ್ಕಿ ತೋಟೇಶ್, ಹಾಲ್ದಾಳ್ ವಿಜಯಕುಮಾರ್, ಕನ್ನಿಹಳ್ಳಿ ಚಂದ್ರಶೇಖರ್, ದೇವೆಂದ್ರಪ್ಪ, ಗೀರಿಶ್ ಗೌರಜ್ಜನವರ್, ಯಂಕಪ್ಪ, ಬೆಣ್ಣಿಕಲ್ಲು ಹನುಮಂತಪ್ಪ, ಅಜೀಜುಲ್ಲಾ, ಜಂದಿಸಾಬ್, ಮಂಜುನಾಥ ಪಾಟೀಲ್, ಭದ್ರವಾಡಿ ಚಂದ್ರಶೇಖರ್, ಆರ್.ಕೇಶವರೆಡ್ಡಿ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ