ಬೆಂಗಳೂರು
ಅಪರಾಧ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ, ಮಾದಕ ವಸ್ತುಗಳಿಂದಾಗುವ ಅಪಾಯ, ಉತ್ತಮ ಆರೋಗ್ಯಕ್ಕಾಗಿ ಅಮಲು ಪದಾರ್ಥಗಳಿಂದ ದೂರ ಇರುವ ಕುರಿತು ಪೊಲೀಸರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಂದ ಬೃಹತ್ ಜನ ಜಾಗೃತಿ ಮ್ಯಾರಥಾನ್ ಓಟ ಏರ್ಪಡಿಸಲಾಗಿತ್ತು.
ದಾಸರಹಳ್ಳಿಯ 8ನೇ ಮೈಲಿ ಬಳಿಯ ಮೇಡಿಅಗ್ರಹಾರದಿಂದ ಬೆಳ್ಳಂಬೆಳಗ್ಗೆ ಸಾಗಿದ ಮ್ಯಾರಥಾನ್ ಓಟ ಪ್ರಭಾಕರ ಕೋರೆ ಕಾಲೇಜು ಬಳಿ ಸಮಾಪ್ತಿಯಾಯಿತು. ಸಪ್ತಗಿರಿ ವೈದ್ಯಕೀಯ ಕಾಲೇಜಿನ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಯುವಕರು, ಸಾರ್ವಜನಿಕರು, ನೂರಾರು ಮಂದಿ ಪೊಲೀಸರು ಪಾಲ್ಗೊಂಡು ಜನರಲ್ಲಿ ಅರಿವು ಮೂಡಿಸಿದರು.
ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ ಸಿಂಗ್ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳ ಜತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಓಟದಲ್ಲಿ ಭಾಗಿಯಾಗಿ ಜನ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ಮಾದಕ ವಸ್ತುಗಳಿಂದಾಗುವ ತೊಂದರೆ, ವೈಯಕ್ತಿಕ ಮತ್ತು ಸಮಾಜದ ಮೇಲಾಗುವ ಪರಿಣಾಮಗಳು, ಯುವ ಶಕ್ತಿ ಮಾದಕ ವಸ್ತುಗಳ ದಾಸರಾದರೆ ಆ ಕುಟುಂಬ ಎದುರಿಸುವ ಸಮಸ್ಯೆಗಳು ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಹೊರ ದೇಶ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳು ಕಳ್ಳ ಸಾಗಾಣೆ ಮೂಲಕವೂ ಆಯಕಟ್ಟಿನ ಪ್ರದೇಶಗಳಿಗೆ ತಲುಪಿಸುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿವೆ. ಇಂತಹ ಜಾಲದ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ತಮ್ಮ ಗಮನಕ್ಕೆ ತರುವಂತೆ ಜನ ಸಾಮಾನ್ಯರಿಗೆ ಪೊಲೀಸರು ಮನವಿ ಮಾಡಿದರು.
ಬೆಂ.ನಗರ ಉತ್ತರ ವಿಭಾಗದ 15ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು, 150ಕ್ಕೂ ಹೆಚ್ಚು ಪೊಲೀಸರು ಓಟದಲ್ಲಿ ಭಾಗಿಯಾದರು. ಯುವಕರು ಮತ್ತು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ಜನ ಮಾದಕ ವಸ್ತುಗಳಿಂದ ದೂರ ಇರಬೇಕು ಎಂದು ಮನವಿ ಮಾಡಿದರು. ಉತ್ತರ ವಿಭಾಗದ ಹಿರಿಯ ಐಪಿಎಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್, ಕಿರುತೆರೆ, ಬೆಳ್ಳಿತೆರೆ ನಟನಟಿರು, ನಿರ್ದೇಶಕರ ಓಟದಲ್ಲಿ ಪಾಲ್ಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ