ಬಿಸಿಯೂಟ ತಯಾರಕರ ಪ್ರತಿಭಟನೆ

ಹಾವೇರಿ:
 
         ಈ ಸಾಲಿನ ಬಜೆಟ್ ನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಬಳ ಹೆಚ್ಚಿಸಿದರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್  (ಎಐಟಿಯುಸಿ) ನೇತೃತ್ವದಲ್ಲಿ ಬಿಸಿಯೂಟ ತಯಾರಕರು ಪ್ರತಿಭಟನೆ ನಡೆಸಿದರು. 
 ನಗರದ ಕಾಗಿನೆಲ್ಲಿ ರಸ್ತೆಯಲ್ಲಿರುವ ಮುರುಘರಾಜೇಂದ್ರ ಮಠದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಹಾವೇರಿ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟನೆ ಮಾಡಿದರು. 
 
         ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ದಿನಾಂಕ 19-11-2018 ರಂದು ದೇಹಲಿಯ ಪಾರ್ಲಿಮೆಂಟ್ ಭವನದ ಮುಂದೆ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರ ಬಿಸಿಯೂಟ ತಯಾರಕರ ಸಂಭಳ ಹೆಚ್ಚಿಸಬೇಕು ಎಂದು ಒತ್ತಾಯ ಮಾಡಲಾಗಿತ್ತು. ಆದರೆ, ಪ್ರತಿಭಟನೆಗೆ ಗಣನೆಗೆ ತೆಗೆದುಕೊಳ್ಳದ ಕೇಂದ್ರ ಸರಕಾರ ದುಡಿಯುವ ಮಹಿಳೆಯರ ಸಂಭಳ ಹೆಚ್ಚಿಸದೆ, ಅವರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು. 
         ಇದರ ಜೊತೆಗೆ ದಿನಾಂಕ 2-12-2018 ರಂದು ರಂದು ಬೆಂಗಳೂರಿನಲ್ಲಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪ್ರೀಡಂ ಪಾರ್ಕನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿತ್ತು. ಆ ಸಮಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು ದಿನಾಂಕ 3-12-2018 ರಂದು ಸಂಘಟನೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, 2019-2020 ಬಜೆಟ್ ನಲ್ಲಿ ವೇತನ ಹೆಚ್ಚಿಸುವ ಭರವಸೆ ನೀಡಿದ್ದರು. ಅವರ ಭರವಸೆ ಮಾತುಗಳನ್ನು ನಂಬಿ ಅಂದು ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ಹಿಂಪಡೆದುಕೊಂಡಿದ್ದೇವು. ಆದರೆ, ರಾಜ್ಯ ಸರಕಾರ ಮಂಡಿಸಿದ ಬಜೆಟ್ ನಲ್ಲಿ ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಕಡೆಗಣಿಸಲಾಗಿದೆ. ಅವರಿಗೆ ಸಂಭಳ ಹೆಚ್ಚಳ ಮಾಡದೇ ಮೋಸ ಮಾಡಲಾಗಿದೆ ಎಂದು ಆರೋಪಿಸಿದರು. 
        ರಾಜ್ಯದ ಮುಖ್ಯಮಂತ್ರಿಗಳು ಭರವಸೇ ನೀಡಿದಂತೆ, ಬಜೆಟ್ ನಲ್ಲಿ ಸಂಭಳ ಹೆಚ್ಚಳ ಮಾಡಬೇಕಿತ್ತು. ಆದರೆ, ಮುಖ್ಯಮಂತ್ರಿಗಳ ಅದನ್ನು ಮಾಡದೇ, ಅಂದಿನ ಅಹೋರಾತ್ರಿ ಧರಣಿಯನ್ನು ಹತ್ತಿಕ್ಕಲು ಸುಳ್ಳು ಭರಸವೆ ನೀಡಿದರು ಎಂಬ ಅನುಮಾನ ಮೂಡುತ್ತಿದೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ನುಡಿದಂತೆ ನಡೆಯುವುದಿಲ್ಲ ಎಂಬ ಬಲವಾದ ಆರೋಪವಿತ್ತು. ಬಜೆಟ್ ಅಧಿವೇಶನ ಬಳಿಕ ಅದು ಮತ್ತೊಮ್ಮೆ ನಿಜ ಎಂಬುದು ಸಾಭಿತಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮೀ ಅವರು, ತಕ್ಷಣ ಎಚ್ಚತ್ತುಕೊಂಡು ಬಿಸಿಯೂಟ ತಯಾರಕರ ಸಂಭಳ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 
         ಸಂಘಟನೆಯ ಜಿಲ್ಲಾಧ್ಯಕ್ಷ ಜಿ.ಡಿ. ಪೂಜಾರ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮೀ ಅವರು ಅಧಿಕಾರಕ್ಕೆ ಬಂದರೆ, ಬಿಸಿಯೂಟ ತಯಾರಕರನ್ನು ಖಾಯಂಗೊಳಿಸುತ್ತೇನೆ ಎಂಬ ಭರವಸೇ ನೀಡಿದ್ದರು, ಖಾಯಂ ಗೊಳಿಸುವುದಿರಲಿ, ಸಂಬಳ ಹೆಚ್ಚಳ ಮಾಡದೇ, ಮೋಸ ಮಾಡಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಬಿಸಿಯೂಟ ನೌಕರರು ತುಂಬಾ ನಂಬಿಕೆ ಹೊಂದಿದ್ದರು. ಆ ನಂಬಿಕೆಯನ್ನು ಉಳಿಸಿಕೊಳ್ಳುವಂತ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು. ಆ ಕಾರಣದಿಂದ ಅವರು ಘೋಷಣೆ ಮಾಡಿದಂತೆ ಭರವಸೇಗಳನ್ನು ಈಡೇರಿಸಬೇಕು. ಬಿಸಿಯೂಟ ಸಿಬ್ಬಂಧಿಗಳಿಗೆ ಮಾಸಿಕ 10500 ರೂ ಸಂಬಳ ನಿಗದಿ ಮಾಡಬೇಕು. ಮಾಸಿಕ 3000 ಸಾವಿರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು. 
           ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ರೇಖಮ್ಮಾ ದನ್ನೂರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗುರುನಾಥ ಲಕ್ಮಾಪೂರ, ತಾಲೂಕ ಅಧ್ಯಕ್ಷರಾದ ಸರೋಜಮ್ಮಾ ಹಿರೇಮಠ, ಲಲಿತಾ ಬುಶೇಟ್ಟಿ, ರಾಜೇಶ್ವರಿ ದೊಡ್ಡಮನಿ, ಲತಾ ಹಿರೇಮಠ, ನಿರ್ಮಲಾ ಬಂಕಾಪುರಮಠ, ಪ್ರೇಮಾ ತಡಸ, ತಾಲೂಕ ಸಂಚಾಲಕರಾದ ವಿದ್ಯಾ ಸಿದ್ದಪ್ಪನವರ, ಲಲಿತಾ ಕಾಯಕದ,ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap