ಚಿತ್ರದುರ್ಗ:
ನಗರದಲ್ಲಿ ಅಗೆದಿರುವ ರಸ್ತೆಗಳನ್ನು ತ್ವರಿತಗತಿಯಲ್ಲಿ ಡಾಂಬರೀಕರಣಗೊಳಿಸುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ತಾ.ಪಂ.ಮುಂಭಾಗ ಬುಧವಾರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು ನಗರೋತ್ಥಾನ ಯೋಜನೆಯಡಿ 90 ಲಕ್ಷ ರೂ.ಗಳ ವೆಚ್ಚದಲ್ಲಿ ತಾ.ಪಂ.ಮುಂಭಾಗ ಕೆ.ಎಸ್.ಆರ್.ಟಿ.ಸಿ.ಡಿಪೋ ರಸ್ತೆಯಿಂದ ಅಂಬಾಭವಾನಿ ದೇವಸ್ಥಾನದವರೆಗೆ ಹಾಗೂ ಕೋರ್ಟ್ಗೆ ಹೋಗುವ ರಸ್ತೆ, ಆಕಾಶವಾಣಿ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗುತ್ತಿದೆ. ನಗರದಲ್ಲಿ ಹಂತ ಹಂತವಾಗಿ ಒಂದೊಂದೆ ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ಮಣ್ಣಿನ ರಸ್ತೆಗಳನ್ನು ಅಲ್ಲಲ್ಲಿ ಅಗೆಯಲಾಗಿದೆ. ರಸ್ತೆ ಡಾಂಬರೀಕರಣಗೊಳಿಸುವಾಗ ಕೆಲವು ಕಡೆ ಮನೆಯ ಮಾಲೀಕರುಗಳು ಸಣ್ಣ ಪುಟ್ಟ ತಗಾದೆಗಳನ್ನು ತೆಗೆಯುತ್ತಿರುವುದರಿಂದ ರಸ್ತೆ ರಿಪೇರಿ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶೀಘ್ರವೇ ಪೂರೈಸಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಳಪೆಯಾದರೆ ಸಹಿಸುವುದಿಲ್ಲ. ಅಧಿಕಾರಿಗಳು, ಗುತ್ತಿಗೆದಾರರುಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.ಇಂಜಿನಿಯರ್ ಹಾಗೂ ಗುತ್ತಿಗೆದಾರರು ಈ ಸಂದರ್ಭದಲ್ಲಿ ಹಾಜರಿದ್ದರು.