ಬೆಂಗಳೂರು
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲೂ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಸ್ಪರ್ಧಿಸಲಿದ್ದು ಕಾಂಗ್ರೆಸ್,ಜೆಡಿಎಸ್ ಸೇರಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಅಶೋಕ್ ಸಿದ್ದಾರ್ಥ ಸ್ಪಷ್ಟ ಪಡಿಸಿದ್ದಾರೆ
ದೇಶದಲ್ಲಿಯೇ ಮೂರನೇ ಅತಿ ದೊಡ್ಡ ಪಕ್ಷ ಬಿಎಸ್ಪಿಯಾಗಿದ್ದು ನಮ್ಮದೇ ಆದ ಮತ ಬ್ಯಾಂಕ್ ಹೊಂದಿರುವುದರಿಂದ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಕರ್ನಾಟಕದಲ್ಲಿ ಸ್ವಾತಂತ್ರ್ಯವಾಗಿ ಸ್ಪರ್ಧಿಸಲಿದೆ ಎಂದು ತಿಳಿಸಿದರು.
ನಗರದ ಕ್ವೀನ್ಸ್ ರಸ್ತೆಯ ಖಾಸಗಿ ಭವನದಲ್ಲಿ ಬಿಎಸ್ಪಿ ರಾಜ್ಯ ಘಟಕ ಆಯೋಜಿಸಿದ್ದ, ಮುಸ್ಲಿಂ ಮುಖಂಡ ಶರಿಯರ್ ಖಾನ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ದಲಿತ, ಮುಸ್ಲಿಮರು ಒಂದಾಗಿದ್ದಾರೆ.ಅದೇ ರೀತಿ ಕರ್ನಾಟಕದಲ್ಲೂ ಒಂದಾಗಬೇಕು. ಹೀಗಾಗಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಮುಸ್ಲಿಮರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದರು.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಹುತಾತ್ಮ ಯೋಧ ಗುರು ಪತ್ನಿಯನ್ನು ಮಂಡ್ಯದಿಂದ ಕಣಕ್ಕೆ ಇಳಿಸುವ ಪ್ರಸ್ತಾಪ ಇಲ್ಲ.ಆಕೆಗೆ ಇನ್ನೂ, 25 ವಯೋಮಿತಿ ಮೀರಿಲ್ಲ. ಇನ್ನೂ ಶ್ರೀಘ್ರದಲ್ಲಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಬಿಎಸ್ಪಿ ರಾಜ್ಯ ಸಂಚಾಲಕ ಶರಿಯರ್ ಖಾನ್ ಮಾತನಾಡಿ, ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಕುರಿತು ಧ್ವನಿಗೂಡಿಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಬಿಎಸ್ಪಿ ಮುಸ್ಲಿಮರ ಪಕ್ಷವಾಗಿದ್ದು, ಇದಕ್ಕಾಗಿ ಸಂಘಟನೆ ಮಾಡಬೇಕು. ಅದೇ ರೀತಿ, ಸಾಚಾರ್ ಕಮಿಟಿ ವರದಿ ಜಾರಿ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಹೋರಾಟ ನಡೆಸಲಾಗುವುದು ಎಂದರು.
ಬಿಎಸ್ಪಿ ರಾಜ್ಯ ಘಟಕ ಅಧ್ಯಕ್ಷ ಹರಿರಾಂ, ರಾಜ್ಯ ಉಸ್ತುವಾರಿ ಎಂ.ಎಲ್.ತೋಮರ್, ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಖಜಾಂಚಿ ಸಲ್ಮಾ ಸೇರಿದಂತೆ ಪ್ರಮುಖರಿದ್ದರು.