ಬ್ಯಾಡಗಿ:
ಛತ್ತೀಸ್ಗಡ ಹಾಗೂ ರಾಜಸ್ಥಾನಗಳಲ್ಲಿ ನಿಚ್ಚಳ ಬಹುಮತದೊಂದಿಗೆ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ತಾಲ್ಲೂಕಾ ಘಟಕದ ಕಾರ್ಯಕರ್ತರು ಪಟ್ಟಣದ ಹಳೇ ಪುರಸಭೆ ಎದುರು ವಿಜಯೋತ್ಸವ ಆಚರಿಸಿದರು.ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಎರಡು ರಾಜ್ಯಗಳಲ್ಲಿ ನಿಚ್ಚಳ ಜಯಸಾಧಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಾಂಗ್ರೆಸ್ ಮತ್ತೆ ವೈಭವ ಗಳಿಸುತ್ತಿದೆ:ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಕರಲಿಂಗಪ್ಪನರ, ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಕಳೆದುಕೊಂಡು ರಾಜ್ಯವನ್ನು ಮರಳಿ ಪಡಯುತ್ತಾ ಸಾಗಿದ್ದು ಮತ್ತೆ ವೈಭವವನ್ನು ಮೆರೆಯಲಿದೆ, ಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ವಿಜಯ ಸಾಧಿಸಲಿದ್ದು ಬಿಜೆಪಿ ದುರಾಡಳಿತಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ರಾಹುಲ್ ಗಾಂಧಿ ಮುಂದಿನ ಪ್ರಧಾನಿ:ಕಾರ್ಯದರ್ಶಿ ರಮೇಶ ಸುತ್ತಕೋಟಿ ಮಾತನಾಡಿ, ಬರುವ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದೊಂದಿಗೆ ದೇಶದಲ್ಲಿ ಸರ್ಕಾರ ರಚಿಸುವುದು ನಿಶ್ವಿತ, ಐದು ರಾಜ್ಯಗಳ ಫಲಿತಾಂಶದಿಂದ ದೇಶದ ಜನತೆ ಬಿಜೆಪಿಯನ್ನು ಕೆಳಗಿಳಿಸಲು ನಿರ್ಧರಿಸಿದಂತಿದೆ ಎಂದರು.
ಮಧ್ಯಪ್ರದೇಶದಲ್ಲಿಯೂ ಸರ್ಕಾರ ರಚನೆ:ಜಗದೀಶಗೌಡ ಪಾಟೀಲ ಮಾತನಾಡಿ, ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದು ಅಲ್ಲಿಯೂ ಕಾಂಗ್ರೆಸ್ ಅಲ್ಲಿಯೂ ಕೂಡ ಸರ್ಕಾರ ರಚನೆ ಮಾಡಲಿದೆ, ಜಾತ್ಯಾತೀತ ಶಕ್ತಿಗಳು ಒಂದಾಗಿದ್ದು ಕೋಮುವಾದಿ ಬಿಜೆಪಿಯನ್ನು ಕೆಳಗಿಳಿಸಲು ನಿರ್ಧರಿಸಿದ್ದಾರೆ ಎಂದರು.
ರಾಮ ಮಂದಿರ ತಿರುಗು ಬಾಣ: ಮುಖಂಡ ಶಂಕರಗೌಡ ಪಾಟೀಲ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಉದ್ದೇಶವನ್ನಿಟ್ಟುಕೊಂಡು ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಇಂದಿಗೂ ಒಂದು ಇಟ್ಟಿಗೆಯನ್ನು ವಿವಾದಿತ ಸ್ಥಳದಲ್ಲಿ ಇಡಲಾಗಿಲ್ಲ, ಇದರಿಂದ ಪಕ್ಷದ ಉದ್ದೇಶ ಅರ್ಥವಾಗುತ್ತದೆ ರಾಮಮಂದಿರ ಉದ್ದೇಶ ಬಿಜೆಪಿಗಿಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ನಜೀರ್ ಅಹ್ಮದ ಶೇಖ್, ಮಜೀದ್ ಮುಲ್ಲಾ, ಮಂಜುನಾಥ ಬೋವಿ, ಶಿವನಾಗಪ್ಪ ದೊಡ್ಮನಿ, ಬೀರಪ್ಪ ಬಣಕಾರ, ಹನುಮಂತಪ್ಪ ಲಮಾಣಿ, ಡಿ.ಎಚ್.ಬುಡ್ಡನಗೌಡ್ರ, ಹೊನ್ನಪ್ಪ ಬಾರ್ಕಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ