ಬೆಂಗಳೂರು
ಅಪರಾಧ ಕೃತ್ಯಗಳಲ್ಲಿ ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಖತರ್ನಾಕ್ ಖದೀಮ ದಿನೇಶ್ಗೆ ಬಾಣಸವಾಡಿ ಪೊಲೀಸರು ಮಂಗಳವಾರ ಮಧ್ಯರಾತ್ರಿ ಗುಂಡು ಹೊಡೆದು ಬಂಧಿಸಿದ್ದಾರೆ.
ಬಾಣಸವಾಡಿ, ಹೆಣ್ಣೂರು, ಜೆಸಿನಗರ ಸೇರಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ 12 ಗಂಭೀರ ಅಪರಾಧ ಪ್ರಕರಣದಲ್ಲಿ ಬೇಕಾಗಿದ್ದ ಕಮ್ಮನಹಳ್ಳಿಯ ದಿನೇಶ್ ದೋರಾ ಅಲಿಯಾಸ್ ದಿನೇಶ್ (30) ಬಲಗಾಲಿಗೆ ಪೊಲೀಸ್ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆರೋಪಿ ದಿನೇಶ್ನಿಂದ ಹಲ್ಲೆಗೊಳಗಾಗಿರುವ ಬಾಣಸವಾಡಿ ಪೊಲೀಸ್ ಠಾಣೆ ಪೇದೆ ಮೂರ್ತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿಪಿ ರಾಹುಲ್ಕುಮಾರ್ ಶಹಪೂರವಾಡ ತಿಳಿಸಿದ್ದಾರೆ.
ಮಾಹಿತಿ ಪತ್ತೆ
ಅಪರಾಧ ಕೃತ್ಯಗಳ ಸಂಬಂಧ ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ದಿನೇಶ್ ಅಪರಾಧ ಕೃತ್ಯಗಳಲ್ಲಿ ತೊಡಗಿ ಮೋಜಿನ ಜೀವನ ನಡೆಸುತ್ತಿದ್ದನು. ಬಾಣಸವಾಡಿಯಲ್ಲಿ ನಡೆಸಿದ್ದ ಹಲ್ಲೆ ಬೆದರಿಕೆ ಪ್ರಕರಣದ ಸಂಬಂಧ ಶೋಧ ನಡೆಸುತ್ತಿದ್ದ ಇನ್ಸ್ಪೆಕ್ಟರ್ ವಿರೂಪಾಕ್ಷ ಅವರು ದಿನೇಶ್ ಕೆಜಿಹಳ್ಳಿಯ ಆಯೋಧ್ಯ ಪಾರ್ಕ್ ಬಳಿ ರಾತ್ರಿ 11.45ರ ವೇಳೆ ಇರುವ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ಕೈಗೊಂಡರು.
ಪೊಲೀಸರ ಜೀಪನ್ನು ನೋಡಿ ಓಡುತ್ತಿದ್ದ ದಿನೇಶ್ನನ್ನು ಪೊಲೀಸ್ ಪೇದೆ ಮೂರ್ತಿ ಬೆನ್ನಟ್ಟಿ ಹಿಡಿಯಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಇನ್ಸ್ ಪೆಕ್ಟರ್ ವಿರೂಪಾಕ್ಷ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಆತ ತಪ್ಪಿಸಿಕೊಳ್ಳಲು ಹೋದಾಗ ಮತ್ತೊಂದು ಗುಂಡು ಹಾರಿಸಿದ್ದಾರೆ.
ವಾರೆಂಟ್ ಜಾರಿ
ದಿನೇಶ್ನ ಬಲಗಾಲಿಗೆ ಆ ಗುಂಡು ತಗುಲಿ ಆತ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ದಿನೇಶ್ ವಿರುದ್ಧ ಇಂದಿರಾನಗರ, ಡಿಜೆ ಹಳ್ಳಿ, ಹೆಣ್ಣೂರು, ಜೆಸಿ ನಗರ, ಬಸವೇಶ್ವರ ನಗರ ಪೆÇಲೀಸ್ ಠಾಣೆಯಲ್ಲಿ ಒಟ್ಟು 12 ಪ್ರಕರಣಗಳಿದ್ದು ದಾಖಲಾಗಿದ್ದು,ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದವು ಎಂದು ಅವರು ತಿಳಿಸಿದ್ದಾರೆ.
ವಾರೆಂಟ್ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗದೇ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಆರೋಪಿಯು ಬಾಣಸವಾಡಿಯಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ಭಾಗಿಯಾಗಿ ಮೋಜಿನ ಜೀವನ ನಡೆಸುತ್ತಿದ್ದ ಆತನಿಗಾಗಿ ಪೂರ್ವ ವಿಭಾಗದ ಪೊಲೀಸರು ತೀವ್ರ ಶೋಧ ನಡೆಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ