ದಾವಣಗೆರೆ:
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡುವ ಸದುದ್ದೇಶದಿಂದ ಇಂದಿನಿಂದ (ಏ.25ರಿಂದ) ಏ.27ರ ವರೆಗೆ ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ `ನಮ್ಮ ದವನ-2019’ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸ್ಟುಡೆಂಟ್ಸ್ ಅಕಾಡೆಮಿಕ್ ಕೌನ್ಸಿಲ್ನ ಸಲಹೆಗಾರ ಡಾ.ಜಿ.ಪಿ.ದೇಸಾಯಿ ತಿಳಿಸಿದ್ದಾರೆ.
ಬುಧವಾರ ಮಾತನಾಡಿದ ಅವರು, ಇಂದು ಸಂಜೆ ಬಿಐಇಟಿ ಕಾಲೇಜಿನ ಮುಖ್ಯ ವೇದಿಕೆಯಲ್ಲಿ ನಡೆಯುವ ನಮ್ಮ ದವನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿವಿ ಕುಲಪತಿ ಡಾ.ಶರಣಪ್ಪ ವಿ. ಹಲಸೆ, ಸಿನಿಮಾ ಕಲಾವಿದ ವಶಿಷ್ಠ ಎನ್.ಸಿಂಹ ಭಾಗವಹಿಸಲಿದ್ದಾರೆ. ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಅಧ್ಯಕ್ಷತೆ ವಹಿಸುವರು. ಕಾಲೇಜಿನ ಡೀನ್ ಡಾ.ಹೆಚ್.ಬಿ.ಅರವಿಂದ್, ಪ್ರಾಂಶುಪಾಲ ಡಾ.ಎಂ.ಸಿ.ನಟರಾಜ್ ಮತ್ತಿತರರು ಉಪಸ್ಥಿತರಿರಲಿದ್ದಾರೆಂದು ಮಾಹಿತಿ ನೀಡಿದರು.
ಸಂಗೀತ, ನೃತ್ಯ, ನಾಟಕ, ಚರ್ಚೆ, ಸಾಹಿತ್ಯ, ಕಲೆ ಸೇರಿದಂತೆ 30ಕ್ಕೂ ಹೆಚ್ಚು ವಿವಿಧ ಬಗೆಯ ಸ್ಪರ್ಧೆಗಳು ಮೂರು ದಿನಗಳ ಕಾಲ ಸಂಜೆ 7 ಗಂಟೆಯಿಂದ ನಡೆಯಲಿವೆ. ಈ ವರ್ಷ ಮ್ಯಾಪಿಜೋನ್, ಐಡಿಯಾಥಾನ್, ಏರ್ಕ್ರ್ಯಾಶ್, ಪೋಟೋಕಾರ್ನರ್, ಕಮಾನು ನಿರ್ಮಾಣ ಮತ್ತು ಮೌಖಿಕ ವಿಷಯ ಪ್ರಾತ್ಯಕ್ಷಿಕೆ ಸೇರಿದಂತೆ ಮೊದಲಾದ ಹೊಸ ಸ್ಪರ್ಧೆಗಳು ನಡೆಯಲಿವೆ ಎಂದರು.
ಏ.26 ಮತ್ತು 27ರಂದು ಸ್ಪರ್ಧೆಗಳು ನಡೆಯಲಿವೆ. 26ರಂದು ಸಂಜೆ 8ಕ್ಕೆ ದ್ವೀತಿಯ ಮತ್ತು ತೃತೀಯ ಬಹುಮಾನಗಳ ವಿತರಣೆ ನಡೆಯಲಿದೆ. ಯುಪಿಎಸ್ಸಿಯಲ್ಲಿ 336ನೇ ರ್ಯಾಂಕ್ ಪಡೆದ ಮಿರ್ಜಾ ಖಾದಿರ್ ಬೇಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಏ.27ರಂದು ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್ ಟಿ.ಜೆ. ಆಗಮಿಸುವರು. ಪಡ್ಡೆಹುಲಿ ಚಿತ್ರದ ನಟ, ನಟಿ, ನಿರ್ದೇಶಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ.ನಟರಾಜ್, ಡಾ.ಸಿ.ಎಂ.ಕಲ್ಲೇಶಪ್ಪ, ಡಾ.ಎಸ್.ಎನ್.ರಮೇಶ್, ಡಾ.ಕೆ.ಸಿ.ದೇವೀಂದ್ರಪ್ಪ, ಡಾ.ಹೆಚ್.ಬಿ.ಅರವಿಂದ್, ಡಾ.ವೀಣಾ ಕುಮಾರ್, ಡಾ.ವಿನುತ ಹೆಚ್.ಪಿ, ಶ್ರೀರಕ್ಷಾ, ಪದ್ಮಶ್ರೀ, ವರುಣ್ ಎಸ್. ಪಾಟೀಲ್, ಚಂದನ್, ವಿಶ್ವನಾಥ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ