ಬಳ್ಳಾರಿ
ಬಳ್ಳಾರಿ ಲೋಕಸಭಾ ಉಪಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ವಿಜಯನಗರ ವಿಧಾನಸಭಾ ಕ್ಷೇತ್ರದ ಬುಕ್ಕಸಾಗರ ಚೆಕ್ಪೋಸ್ಟ್ ಸೇರಿದಂತೆ ವಿವಿಧೆಡೆ ನಿರ್ಮಿಸಲಾಗಿರುವ ಚೆಕ್ಪೋಸ್ಟ್ಗಳಿಗೆ ವಿಜಯನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಆಗಿರುವ ಹೊಸಪೇಟೆ ಸಹಾಯಕ ಆಯುಕ್ತ ಎನ್.ಲೋಕೇಶ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ಬುಕ್ಕಸಾಗರ ಚೆಕ್ಪೋಸ್ಟ್ಗಳಿಗೆ ತೆರಳಿ ಪರಿಶೀಲಿಸಿದ ಅವರು, ಪೊಲೀಸ್ ಸಿಬ್ಬಂದಿ, ಅಬಕಾರಿ ಮತ್ತು ಸ್ಟಾಟಿಕ್ ಸರ್ವೆಲೈನ್ಸ್ ತಂಡ ಕಾರ್ಯನಿರ್ವಹಿಸುತ್ತಿರುವುದನ್ನು ಪರಿಶೀಲಿಸಿದರು ಹಾಗೂ ಸಿಸಿ ಕ್ಯಾಮೆರಾ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದರು. ಕೆಲಹೊತ್ತು ಅಲ್ಲಿಯೇ ಇದ್ದ ಎಸಿ ಲೋಕೇಶ ಅವರು, ಸಂಚರಿಸುತ್ತಿದ್ದ ವಾಹನಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ್ದು ಕಂಡುಬಂದಿತು. ಇದಾದ ನಂತರ ಅವರು ಇಂಗಳಗಿ ಸೇರಿದಂತೆ ವಿವಿಧ ಚೆಕ್ಪೋಸ್ಟ್ಗಳ ತಪಾಸಣೆಗೆ ತೆರಳಿದರು.
ಬಳ್ಳಾರಿ ತಹಸೀಲ್ದಾರ್ ನಾಗರಾಜು ಅವರು ಸಹ ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಸಿಂಧುವಾಳ್ ಚೆಕ್ಪೋಸ್ಟ್ ಸೇರಿದಂತೆ ವಿವಿಧ ಚೆಕ್ಪೋಸ್ಟ್ಗಳಿಗೆ ತೆರಳಿ ಪರಿಶೀಲಿಸಿದರು. ಅಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಅಲ್ಲಿ ಉಪಸ್ಥಿತರಿದ್ದ ಸಿಬ್ಬಂದಿಗೆ ಚುನಾವಣಾ ನೀತಿ ಉಲ್ಲಂಘನೆಯಾಗದ ರೀತಿಯಲ್ಲಿ ಚುನಾವಣಾ ಗೈಡಲೈನ್ಸ್ ಅನುಸಾರ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಹಗರಿಬೊಮ್ಮನಳ್ಳಿ ತಹಸೀಲ್ದಾರ್ ವಿಜಯಕುಮಾರ ಅವರು ಸಹ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹರಾಳ ಚೆಕ್ಪೋಸ್ಟ್ ಸೇರಿದಂತೆ ವಿವಿಧ ಚೆಕ್ಪೋಸ್ಟ್ಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಎಸ್ಎಸ್ಟಿ, ಪೊಲೀಸ್ ಮತ್ತು ಅಬಕಾರಿ ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ